ಶಿರ್ತಾಡಿ ಮೌಂಟ್ ಕಾರ್ಮೆಲ್ನಲ್ಲಿ ಮೊಂತಿ ಹಬ್ಬ, ಬಲಿಪೂಜೆ
ಶಿರ್ತಾಡಿ : “ಮಾತೃ ಸ್ವರೂಪ ಭೂಮಿಯ ಮೇಲೆ ಇರುವ ಉನ್ನತವಾದ ಭಾವನೆಯಾಗಿದೆ. ದೇವರ ಸೃಷ್ಟಿಯಲ್ಲಿ ಉತ್ಕೃಷ್ಟ ಸಂಬಂಧವಾಗಿ ಮತ್ತು ಅಷ್ಟೇ ಗಟ್ಟಿ ಬಾಂಧವ್ಯವನ್ನು ಪ್ರತಿಪಾದಿಸುವ ಮಾತೃಶಕ್ತಿಯು ಮನುಷ್ಯನನ್ನು ಭೂಮಿಯ ಮೇಲೆ ಪೊರೆಯುವ ಮೂಲಕ ಚೈತನ್ಯ ತುಂಬುತ್ತದೆ. ಮೇರಿ ಮಾತೆಯ ಹುಟ್ಟು ಮಾನವ ಕುಲಕ್ಕೆ ಒಳಿತನ್ನು ಉಂಟುಮಾಡಿದೆ” ಎಂದು ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ನ ಧರ್ಮಗುರುಗಳಾದ ವಂ| ಹೆರಾಲ್ಡ್ ಮಸ್ಕರೇನಸ್ ನುಡಿದರು.
ಅವರು ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೊಂತಿ ಹಬ್ಬದ ಬಲಿಪೂಜೆಯ ಸಮಾವೇಶದಲ್ಲಿ ಮಾತನಾಡಿದರು.“ಯೇಸು ಕ್ರಿಸ್ತರ ಜೀವನ ಶ್ರೇಷ್ಠತೆಗೆ ಮೇರಿ ಮಾತೆಯ ಬದುಕು ಪ್ರೇರಣೆ. ಮಹಾನ್ ವ್ಯಕ್ತಿತ್ವ ಜನ್ಮ ತಳೆಯಲು ಶ್ರೇಷ್ಠ ತಾಯಿ ಜನ್ಮ ಕೊಟ್ಟಿರುವುದರಲ್ಲಿ ಮಾನವ ಕುಲಕ್ಕೆ ದೇವರ ಸಂದೇಶವಿದೆ. ಈ ಬಾರಿಯ ಮೊಂತಿ ಹಬ್ಬವನ್ನು ಕೌಟುಂಬಿಕ ಏಕತೆ ಹಾಗೂ ಹೆಣ್ಣುಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ” ಎಂದರು.
ಈ ಸಂದರ್ಭ ಧರ್ಮಭಗಿನಿಯರು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಹೆರಾಲ್ಡ್ ಡಿಸಿಲ್ವಾ, ಕಾರ್ಯದರ್ಶಿ ಜೆಸಿಂತಾ, ಜೊಯೆಲ್ ಸಿಕ್ವೇರಾ, ಗುರಿಕಾರರು, ಭಕ್ತಾದಿಗಳು ಪಾಲ್ಗೊಂಡಿದ್ದರು. ಭಕ್ತರ ವಾಹನಗಳನ್ನು ಆಶೀರ್ವದಿಸಲಾಯಿತು.