ಪಡುಬಿದ್ರಿ:ವಿಷದ ಹಾವು ಕಡಿದು ವ್ಯಕ್ತಿ ಸಾವು
ಪಡುಬಿದ್ರಿ: ತೆನೆ ಹಬ್ಬಕ್ಕಾಗಿ ಗದ್ದೆಗೆ ತೆನೆ ತರಳು ಹೋಗಿದ್ದ ವ್ಯಕ್ತಿಗೆ ವಿಷ ಜಂತು ಕಡಿದು ಸಾವನ್ನಪ್ಪಿದ ಘಟನೆ ಎರ್ಮಾಳು ನಟ್ಟಿ ಮನೆ ಎಂಬಲ್ಲಿ ನಡೆದಿದೆ.
ಎರ್ಮಾಳು ಮಲ್ಲಕ್ಕ ನಟ್ಟಿ ಮನೆ ನಿವಾಸಿ ಚಂದ್ರಶೇಖರ ಪೂಜಾರಿ (44) ಇವರೇ ಈ ದುರ್ದೈವಿ. ಗುರುವಾರ ನಡೆಯಲಿದ್ದ ತೆನೆ ಹಬ್ಬಕ್ಕೆ ತಮ್ಮದೇ ಕೃಷಿ ಗದ್ದೆಗೆ ತೆನೆ ತರಲು ಹೋದಾಗ ಏನೋ ಕಾಲಿಗೆ ಕಡಿದ ಅನುಭವವಾಗಿದ್ದು ಮನೆಗೆ ಬಂದ ಅವರು ಪತ್ನಿ ಉಷಾ ಅವರಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಅವರು ಪರಚಿದಂತಿದ್ದ ಗಾಯಕ್ಕೆ ಮನೆಮದ್ದು ಲೇಪಿಸಿ ಮಲಗಿದ್ದರು. ಮುಂಜಾನೆ ತೆನೆ ಹಬ್ಬದ ಬಹುತೇಕ ಕೆಲಸವನ್ನು ಮುಗಿಸಿದ ಚಂದ್ರಶೇಖರರಿಗೆ ಇದ್ದಕ್ಕಿದಂತೆ ಉಸಿರು ಕಟ್ಟಿದಂತ್ತಾಗಿದ್ದು ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಮೃತ ಪಟ್ಟಿದ್ದಾರೆ. ಮೃತರು ಎಲೆಕ್ಟ್ರಿಕ್ ವೃತ್ತಿ ನಡೆಸುತ್ತಿದ್ದು, ಇವರ ದುಡಿಮೆಯಿಂದಲೇ ಕುಟುಂಬದ ಜೀವನ ರಥ ಸಾಗುತ್ತಿತ್ತು. ಇದೀಗ ಮನೆ ಯಜಮಾನನ ಅಪಮೃತ್ಯುವಿನಿಂದಾಗಿ ಕುಟುಂಬ ಬಡವಾಗಿದೆ. ಪತ್ನಿ ಉಪಾ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.