ಕಾಪು: ಶಿರ್ವ ವಲಯದ ವಿಶ್ವಹಿಂದೂ ಪರಿಷತ್–ಬಜರಂಗದಳದ ನೇತೃತ್ವದಲ್ಲಿ ನಡೆಯಲಿರುವ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಬಜರಂಗದಳದ ಪ್ರಮುಖರಾದ ಪುನೀತ್ ಅತ್ತಾವರ ಅವರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿರುವ ಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಖಂಡಿಸಿದ್ದಾರೆ.
ಅಖಂಡ ಭಾರತ ಸಂಕಲ್ಪ ದಿನವು ದೇಶದ ಏಕತೆ, ಅಖಂಡತೆ ಹಾಗೂ ರಾಷ್ಟ್ರೀಯ ಭಾವನೆಯನ್ನು ಪ್ರತಿಪಾದಿಸುವ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಪುನೀತ್ ಅತ್ತಾವರ ಅವರನ್ನು ತಡೆಯಲಾಗಿರುವುದು ಗಂಭೀರ ವಿಚಾರ ಎಂದು ಅವರು ಹೇಳಿದ್ದಾರೆ.
ಹಿಂದೂ ಸಮಾಜದ ಧ್ವನಿಯಾಗಿ ಹಾಗೂ ರಾಷ್ಟ್ರೀಯ ವಿಚಾರಗಳಲ್ಲಿ ಸಕ್ರಿಯವಾಗಿರುವ ಸಂಘಪರಿವಾರದ ಮುಖಂಡರನ್ನು ನಿರಂತರವಾಗಿ ನಿರ್ಬಂಧಿಸುವ ಅಥವಾ ಕಾರ್ಯಕ್ರಮಗಳಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ ಎಂಬ ಭಾವನೆ ಹಿಂದೂ ಸಮಾಜದಲ್ಲಿ ಮೂಡುತ್ತಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.
ಪುನೀತ್ ಅತ್ತಾವರ ಅವರ ಮೇಲಿನ ನಿರ್ಬಂಧವನ್ನು ಜಿಲ್ಲಾಡಳಿತ ಮರುಪರಿಶೀಲಿಸಿ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕು. ಹಿಂದೂ ಸಂಘಟನೆಗಳ ಮುಖಂಡರನ್ನು ಗುರಿಯಾಗಿಸಿಕೊಂಡು ಯಾವುದೇ ರೀತಿಯ ತಾರತಮ್ಯ ನಡೆಯದಂತೆ ರಾಜ್ಯ ಸರ್ಕಾರ ಎಚ್ಚರ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


