ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ನಗರ ಯೋಜನಾ ವಿಭಾಗಕ್ಕೆ ಸಂಗ್ರಹಿಸುತ್ತಿದ್ದ ವಿನ್ಯಾಸ ಅನುಮೋದನೆಯ ಶುಲ್ಕವನ್ನು ಪರಿಷ್ಕರಿಸಿರುವುದನ್ನು ಕ್ರೆಡಾಯ್ ಮಂಗಳೂರಿನ ಅಧ್ಯಕ್ಷ ಪುಷ್ಪರಾಜ್ ಜೈನ್ ಸ್ವಾಗತಿಸಿದ್ದಾರೆ.
ಈ ಕುರಿತು ಮಾತನಾಡಿದ ಕ್ರೆಡಾಯ್ ಅಧ್ಯಕ್ಷ ಪುಷ್ಪರಾಜ್ ಜೈನ್, ಜನ ಸಾಮಾನ್ಯರಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ಮೂಡಾದ ಅಧ್ಯಕ್ಷ ರವಿಶಂಕರ್ ಅವರ ನೇತೃತ್ವದ ತಂಡವು ರಾಜ್ಯ ಸರಕಾರವನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಪರಿಷ್ಕೃತ ಶುಲ್ಕ ಸಂಗ್ರಹ ಪ್ರಕ್ರೀಯೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ನಾಗರಿಕರ ಪರವಾಗಿ ಅಭಿನಂದನೆಗಳು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈ ಹಿಂದೆ ನಿವೇಶನ ವಿನ್ಯಾಸ ಅನುಮೋದನೆಯ ಶುಲ್ಕದಲ್ಲಿ ಭಾರೀ ಏರಿಕೆ ಮಾಡಲಾಗಿತ್ತು. ಇದು ಜನಸಾಮಾನ್ಯರ ಮನೆ ನಿರ್ಮಾಣದ ವೆಚ್ಚವು ಗಣನೀಯವಾಗಿ ಹೆಚ್ಚಾಗುತ್ತಿತ್ತು. ಮಾತ್ರವಲ್ಲದೆ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕ್ರೆಡಾಯ್ ಮಂಗಳೂರು ಘಟಕವು ಸಂಸದರು, ಶಾಸಕರು, ಮೂಡಾ ಅಧ್ಯಕ್ಷರೊಂದಿಗೆ ನಿರಂತರವಾಗಿ ಚರ್ಚಿಸಿ ಕಡಿಮೆ ಮಾಡುವಂತೆ ಒತ್ತಾಯವನ್ನು ಮಾಡಿತ್ತು.ಸಾರ್ವಜನಿಕರ ಒತ್ತಾಯ ಮತ್ತು ಕ್ರೈಡಾಯ್ ಮಂಗಳೂರು ಘಟಕದ ಮನವಿಯನ್ನು ಪರಿಷ್ಕರಿಸಿದ ಸರಕಾರವು ವಿನ್ಯಾಸ ಅನುಮೋದನೆ ಶುಲ್ಕವನ್ನು ಸರಿಸುಮಾರು 5 ಪಟ್ಟು ಕಡಿಮೆ ಮಾಡಿದೆ. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಪುಷ್ಪರಾಜ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.ಕಳೆದ ಭಾರಿ ಏರಿಕೆ ಮಾಡಲಾಗಿರುವ ಶುಲ್ಕದ ಪ್ರಕಾರ ಸೆಂಟ್ಸ್ಗೆ 6 ಲಕ್ಷ ಬೆಲೆ ಇರುವ ಕಡೆ ಐದು ಸೆಂಟ್ಸ್ ಜಾಗಕ್ಕೆ ಸುಮಾರು 33ಸಾವಿರ ರೂ.ವರೆಗೆ ಶುಲ್ಕವನ್ನು ವಿಧಿಸಲಾಗುತ್ತಿತ್ತು. ಪರಿಷ್ಕೃತ ಆದೇಶದ ಪ್ರಕಾರ ದರ 6,8೦೦ ರೂ.ಗಳಿಗೆ ಅಂದರೆ ಸುಮಾರು ೫ ಪಟ್ಟು ಕಡಿಮೆಯಾಗಿರುತ್ತದೆ. ಇದರಿಂದಾಗಿ ಮನೆ ನಿರ್ಮಾಣ ಕನಸು ನನಸಾಗಲು ಪೂರಕವಾಗಿದೆ ಎಂದು ತಿಳಿಸಿದ್ದಾರೆ
