ಮಂಗಳೂರು : ಕೆ.ಕೆ ಗಟ್ಟಿಯವರ ನಾಟಕಗಳಲ್ಲಿ ಒಳ್ಳೆಯ ಸಾಮಾಜಿಕ ಮೌಲ್ಯದ ಸಂದೇಶಗಳಿವೆ, ಅವರು ಅನೇಕ ಹೊಸ ಕಲಾವಿದರನ್ನು ರಂಗಕ್ಕೆ ತಂದಿದ್ದಾರೆ, ಅರವಿಂದ ಬೋಳಾರ್ ಅವರಂತಹ ಪ್ರಸಿದ್ಧ ನಟರನ್ನು ರಂಗಭೂಮಿಗೆ ತಂದಂತಹ ಹೆಗ್ಗಳಿಕೆ ಕೆ.ಕೆ. ಗಟ್ಟಿಯವರದ್ದು ಎಂದು ಶ್ರೀ ಕ್ಷೇತ್ರ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾದ ಶರವು ರಾಘವೇಂದ್ರ ಶಾಸ್ತ್ರಿ ಅವರು ಹೇಳಿದರು.
ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಾಟಕಕಾರ ಕೆ.ಕೆ.ಗಟ್ಟಿ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಚಾವಡಿ ತಮ್ಮನ ಗೌರವವನ್ನು ಪ್ರಧಾನ ಮಾಡಿ ಅವರು ಮಾತನಾಡಿದರು.

ನನ್ನ ಗುರುಗಳು: ಅರವಿಂದ ಬೋಳಾರ್

ಸಮಾರಂಭದಲ್ಲಿ ಖ್ಯಾತ ನಟ ಅರವಿಂದ ಬೋಳಾರ್ ಅವರು ಮಾತನಾಡಿ, ನಾನು ರಂಗಭೂಮಿಯಲ್ಲಿ ಪ್ರಸಿದ್ಧಿ ಪಡೆಯಲು ಮೂಲ ಕಾರಣ ಶ್ರೀ ಶರವು ಕ್ಷೇತ್ರ ಹಾಗೂ ಶರವು ಕ್ಷೇತ್ರದಲ್ಲಿ ನನ್ನನ್ನು ನಾಟಕರಂಗಕ್ಕೆ ಪರಿಚಯಿಸಿದ ಕೆ.ಕೆ.ಗಟ್ಟಿಯವರು ನನ್ನ ರಂಗಭೂಮಿಯ ಮೊದಲ ಗುರುಗಳು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, 49 ವರ್ಷಗಳ ಹಿಂದೆ ಶ್ರೀ ಸೋಮನಾಥ ಕಲಾ ಭೂಮಿ ರಂಗಸಂಸ್ಥೆಯನ್ನು ಆರಂಭಿಸಿ 50ಕ್ಕೂ ಹೆಚ್ಚು ಹೆಚ್ಚು ನಾಟಕಗಳನ್ನು ಬರೆದು ನಿರ್ದೇಶನ ಮಾಡಿದ ಕೆ.ಕೆ ಗಟ್ಟಿಯವರ ರಂಗಭೂಮಿ ಸೇವೆ ಅನನ್ಯವಾದದ್ದು ಎಂದು ಬಣ್ಣಿಸಿದರು.


ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ. ಸಿ ಭಂಡಾರಿ, ಶ್ರೀ ಸೋಮನಾಥ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ ಗಟ್ಟಿ ಪಿಲಾರ್ ಶುಭಕೋರಿ ಮಾತನಾಡಿದರು.
ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ವಸಂತ ರೈ ಬಿ.ಕೆ ಅವರು ಸ್ವಾಗತಿಸಿ ವಂದಿಸಿದರು.
