ಪುತ್ತೂರು: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) 10ನೇ ಬಟಾಲಿಯನ್ನ ತಂಡ ವತಿಯಿಂದ ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿಪತ್ತು ನಿರ್ವಹಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

10ನೇ ಬಟಾಲಿಯನ್ನ ಇನ್ಸ್ಪೆಕ್ಟರ್ ಶಾಂತಿಲಾಲ್ ಜಾಟಿಯಾ ಅವರ ನೇತೃತ್ವದಲ್ಲಿ, ಎಎಸ್ಐ ಸುಭಾಷ್ ಶಿಂಧೆ ಹಾಗೂ ತಂಡದ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಪ್ರವಾಹ, ಭೂಕುಸಿತ, ಚಂಡಮಾರುತ, ಸುನಾಮಿ ಹಾಗೂ ಅಗ್ನಿ ಅವಘಡಗಳಂತಹ ವಿಪತ್ತುಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಸ್ವಯಂ ರಕ್ಷಣೆ ಹಾಗೂ ತುರ್ತು ಪ್ರತಿಕ್ರಿಯೆಗಳ ಕುರಿತು ಮಾಹಿತಿ ನೀಡಲಾಯಿತು. ಜೊತೆಗೆ ಸಿಪಿಆರ್ (CPR), ಪ್ರಥಮ ಚಿಕಿತ್ಸೆ, ಗಾಯಾಳುಗಳ ಸ್ಥಳಾಂತರ ಮತ್ತು ಪ್ರವಾಹ ರಕ್ಷಣಾ ತಂತ್ರಗಳ ಪ್ರಾತ್ಯಕ್ಷಿಕೆ ನಡೆಸಲಾಯಿತು.


ಶಾಲೆಯ ಪ್ರಾಂಶುಪಾಲ ಸತೀಶ್ ಕುಮಾರ್ ರೈ, ಉಪ ಪ್ರಾಂಶುಪಾಲ ಕೃಷ್ಣ ಮೋಹನ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದು, ಸುಮಾರು 1,550 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಕಾರ್ಯಕ್ರಮದ ಪ್ರಯೋಜನ ಪಡೆದರು.


