ಕಾಪು : ಕಾಪು ಸರ್ವೀಸ್ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಎರಡು ಖಾಸಗಿ ವೇಗದೂತ ಬಸ್ಗಳ ನಡುವೆ ಸಂಭವಿಸಿದ ಢಿಕ್ಕಿಯಿಂದ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ನಡೆದಿದೆ. ಘಟನೆ ಬಳಿಕ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಎರಡೂ ಬಸ್ಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಸಂದೇಶ್ ಟ್ರಾವೆಲ್ಸ್ ಮತ್ತು ಆನಂದ್ ಟ್ರಾವೆಲ್ಸ್ ಬಸ್ಗಳ ಚಾಲಕ ಹಾಗೂ ನಿರ್ವಾಹಕರ ನಡುವೆ ಟೈಮಿಂಗ್ ವಿಚಾರವಾಗಿ ಉದ್ಯಾವರದಿಂದಲೇ ವಾಗ್ವಾದ ನಡೆಯುತ್ತಿತ್ತು ಎನ್ನಲಾಗಿದೆ. ಕಾಪು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಲು ಮತ್ತು ಇಳಿಸಲು ನಿಂತಿದ್ದ ಸಂದೇಶ್ ಟ್ರಾವೆಲ್ಸ್ ಬಸ್ಗೆ, ಹಿಂದಿನಿಂದ ಬಂದ ಆನಂದ್ ಟ್ರಾವೆಲ್ಸ್ ಬಸ್ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.
ಢಿಕ್ಕಿಯ ರಭಸಕ್ಕೆ ಎರಡೂ ಬಸ್ಗಳಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿ ಬೊಬ್ಬೆ ಹಾಕಿದ್ದಾರೆ. ಬಳಿಕ ಎರಡೂ ಬಸ್ಗಳ ಸಿಬ್ಬಂದಿ ಪರಸ್ಪರ ದೋಷಾರೋಪಣೆ ನಡೆಸಿ, ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿದ್ದರಿಂದ ಸುಮಾರು 15 ನಿಮಿಷಗಳ ಕಾಲ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಆಟೋರಿಕ್ಷಾ ಚಾಲಕರು ಹಲವು ಬಾರಿ ಮನವಿ ಮಾಡಿದರೂ ಬಸ್ಗಳನ್ನು ತೆರವುಗೊಳಿಸಲು ಚಾಲಕರು ಮುಂದಾಗದ ಕಾರಣ ಇತರ ವಾಹನಗಳ ಸಂಚಾರಕ್ಕೂ ತೀವ್ರ ತೊಂದರೆಯಾಯಿತು.
ಮಾಹಿತಿ ಪಡೆದ ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಎರಡೂ ಬಸ್ಗಳನ್ನು ಠಾಣೆಗೆ ಕರೆದೊಯ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾಪು ಸರ್ವೀಸ್ ರಸ್ತೆಯಲ್ಲಿ ಎಕ್ಸ್ಪ್ರೆಸ್ ಬಸ್ಗಳ ಟೈಮಿಂಗ್ ಸ್ಪರ್ಧೆ ಮತ್ತು ಚಾಲಕರ ಕಿತ್ತಾಟಗಳು ಪದೇಪದೇ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸರ್ವೀಸ್ ರಸ್ತೆಯಲ್ಲಿ ಎಕ್ಸ್ಪ್ರೆಸ್ ಬಸ್ಗಳ ಸಂಚಾರವನ್ನು ನಿಷೇಧಿಸಬೇಕು ಎಂಬ ಸಾರ್ವಜನಿಕರ ಆಗ್ರಹಕ್ಕೆ ಈ ಘಟನೆ ಮತ್ತಷ್ಟು ಬಲ ನೀಡಿದೆ.


