ಪಡುಬಿದ್ರಿ: ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ವತಿಯಿಂದ ಹೆಜಮಾಡಿ ಪೇಟೆಯ ಧ್ವಜಸ್ತಂಭದ ಬಳಿ ಯೂನಿಯನ್ ಸದಸ್ಯರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಹೆಜಮಾಡಿ ಜುಮ್ಮಾ ಮಸೀದಿಯ ಧರ್ಮಗುರು ಆಶ್ರಫ್ ಸಖಾಫಿ ಕಿನ್ಯಾ ಅವರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವದ ಮಹತ್ವ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸಿದರು.
ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂಭ್ರಮದ ನಡುವೆಯೇ ಕ್ಯಾನ್ಸರ್ನಿಂದ ಬಳಲುತ್ತಿರುವ ವಿದ್ಯಾರ್ಥಿನಿಯ ಚಿಕಿತ್ಸೆಗೆ ನೆರವಾಗುವ ಮೂಲಕ ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ಹಾಗೂ ಸಾರ್ವಜನಿಕರು ಮಾನವೀಯತೆಯ ಮಾದರಿ ಮೆರೆದಿದ್ದಾರೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜ ಸೇವಕ ರಾಲ್ಫಿ ಡಿಕೋಸ್ತಾ ಮಾತನಾಡಿ, ಆಟೋ ರಿಕ್ಷಾ ಯೂನಿಯನ್ ಕೇವಲ ತನ್ನ ಸದಸ್ಯರ ಹಿತಾಸಕ್ತಿಗೆ ಸೀಮಿತವಾಗದೆ, ಸಮಾಜದ ಸಂಕಷ್ಟದಲ್ಲಿರುವವರ ನೆರವಿಗೆ ಸದಾ ಸ್ಪಂದಿಸುತ್ತಿರುವುದು ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳು ಸ್ವಾತಂತ್ರ್ಯೋತ್ಸವದ ಆಚರಣೆಗೆ ನಿಜವಾದ ಅರ್ಥ ನೀಡುತ್ತವೆ ಎಂದು ಹೇಳಿದರು.

ಯೂನಿಯನ್ ಅಧ್ಯಕ್ಷ ಶೇಖರ್ ಹೆಜಮಾಡಿ ಮಾತನಾಡಿ, ಸ್ವಾತಂತ್ರ್ಯದ ಮಹತ್ವವನ್ನು ಅರಿತುಕೊಂಡು ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ಮೌಲ್ಯಗಳನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ವಿಶೇಷವಾಗಿ ಯುವಜನತೆ ದೇಶದ ಭವಿಷ್ಯವಾಗಿದ್ದು, ಸಮಾಜದ ಒಳಿತಿಗಾಗಿ ತಮ್ಮ ಶಕ್ತಿ ಮತ್ತು ಪ್ರತಿಭೆಯನ್ನು ಬಳಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಜಮಾಡಿ ನಿವಾಸಿ ಸುಧಾಕರ್ ದೇವಾಡಿಗ ಅವರ ಪುತ್ರಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕು. ಶ್ರೇಯಾ ಅವರ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗಲು ಆಟೋ ರಿಕ್ಷಾ ಯೂನಿಯನ್ ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಲಾದ ₹3,62,332 ಮೊತ್ತವನ್ನು ಕಾರ್ಯಕ್ರಮದಲ್ಲಿ ಅತಿಥಿಗಳ ಮೂಲಕ ವಿದ್ಯಾರ್ಥಿನಿಯ ತಂದೆ ಸುಧಾಕರ್ ದೇವಾಡಿಗ ಅವರಿಗೆ ಹಸ್ತಾಂತರಿಸಲಾಯಿತು.
ಶಿಕ್ಷಣದ ಹಂತದಲ್ಲಿರುವ ವಿದ್ಯಾರ್ಥಿನಿಗೆ ಎದುರಾಗಿರುವ ಆರೋಗ್ಯ ಸಂಕಷ್ಟದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚಿದ ಯೂನಿಯನ್ ಸದಸ್ಯರು ಹಾಗೂ ಸಾರ್ವಜನಿಕರ ಮಾನವೀಯ ಕಾರ್ಯಕ್ಕೆ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ವಿದ್ಯಾರ್ಥಿನಿ ಶ್ರೇಯಾ ಅವರು ಶೀಘ್ರ ಗುಣಮುಖರಾಗಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲಿ ಎಂದು ಎಲ್ಲರೂ ಹಾರೈಸಿದರು.
ಈ ಸಂದರ್ಭದಲ್ಲಿ ಹೆಜಮಾಡಿ ಶಾಲೆಯ ಮುಖ್ಯೋಪಾಧ್ಯಾಯಿನಿ ಲತಾ, ಆಟೋ ರಿಕ್ಷಾ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ್, ಕೋಶಾಧಿಕಾರಿ ಚಂದ್ರಶೇಖರ್ ಪುತ್ರನ್, ಸದಸ್ಯರಾದ ಗೋವರ್ಧನ್ ಕೋಟ್ಯಾನ್, ಚಂದ್ರಕಾಂತ್ ಸುವರ್ಣ, ಅಬ್ದುಲ್ ಸಮದ್, ಅಖ್ತರ್ ಶಂಶುದ್ದೀನ್ ಹಾಗೂ ರಮೇಶ್ ಸುವರ್ಣ ಸೇರಿದಂತೆ ಯೂನಿಯನ್ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ವಿಜಯ ಕುಮಾರ್ ಸ್ವಾಗತಿಸಿ ವಂದಿಸಿದರು.


