ಜವಾಬ್ದಾರಿ ಮೆರೆದ ಪತ್ರಕರ್ತರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕಡಬ, ಸುಬ್ರಹ್ಮಣ್ಯ ಭಾಗದಲ್ಲಿ ಅತೀ ಹೆಚ್ಚಿನ ಅನಾಹುತಗಳು ನಡೆದಿದೆ. ಮಂಜೇಶ್ವರ ಸುಬ್ರಹ್ಮಣ್ಯ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಹಲವೆಡೆ ನದಿ ನೀರು ರಸ್ತೆಗೆ ಬಂದು ಸಂಚಾರ ಸ್ಥಗಿತಗೊಂಡಿದೆ. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯಿಂದ ಯಾವುದೇ ವಾಹನಗಳು ಮುಂದಕ್ಕೆ ಸಾಗುವಂತಿಲ್ಲ. ಕಳೆದ ಎರಡು ದಿನಗಳಿಂದ ಇದೇ ಪರಿಸ್ಥಿತಿ ಇದ್ದು ಈ ರಸ್ತೆಯಲ್ಲಿ ಸಾಗುವವರು ಬಳ್ಪ ಗ್ರಾಮದಿಂದ ಗುತ್ತಿಗಾರು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಬೇಕಾಗಿದೆ. ಮಳೆಯ ಈ ಅವಾಂತರದ ವರದಿ ಮಾಡಲು ತೆರಳಿದ್ದ ಟಿವಿ ಮಾದ್ಯಮದವರೂ ಇಲ್ಲಿನ ಸಂಕಷ್ಟವನ್ನು ಸ್ವತಃ ಅನುಭವಿಸಿದ್ದು ಮಾತ್ರವಲ್ಲದೆ, ರಸ್ತೆಗೆ ಬಿದ್ದ ಮರ ತೆರವು ಮಾಡಿ ಜವಾಬ್ದಾರಿ ಮೆರೆದ ಘಟನೆ ನಡೆದಿದೆ.

ಟಿವಿ ವರದಿಗಾರರು ಸುಬ್ರಹ್ಮಣ್ಯದ ಪರ್ವತಮುಖಿ ಎಂಬಲ್ಲಿಗೆ ತೆರಳಿದ್ದರು. ಅಲ್ಲಿಗೆ ತಲುಪಲು ಏನೆಕಲ್ಲಿನ ಸೇತುವೆ ಮೇಲೆ ಹರಿಯುತ್ತಿದ್ದ ನೆರೆ ನೀರು ದಾಟಿ, 2 ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ಅಲ್ಲಿನ ಜನರ ಸಮಸ್ಯೆ ಆಲಿಸಿದ್ದಾರೆ. ಅಷ್ಟೇ ಅಲ್ಲದೆ ಸುಬ್ರಹ್ಮಣ್ಯದಲ್ಲಿ ಸಿಲುಕಿರುವ ಪರ್ವತಮುಖಿ ಗ್ರಾಮದ ಜನರ ಸಮಸ್ಯೆ ಆಲಿಸಲು ಬಳ್ಪ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೂ ತೆರಳಿದ್ದಾರೆ. ಈ ವೇಳೆ ಬಳ್ಪ ಗುತ್ತಿಗಾರು ನಡುವೆ ಕಮಿಲ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು ವಾಹನ ಸಂಚಾರ ಅಲ್ಲೂ ಸ್ಥಗಿತವಾಗಿತ್ತು. ಈ ವೇಳೆ ಸಮೀಪದ ಮನೆಯೊಂದರಿಂದ ಮರ ಕತ್ತರಿಸಲು ಕತ್ತಿ ತಂದು ಮಾದ್ಯಮದ ಸ್ನೇಹಿತರಾದ ಸುವರ್ಣ ಟಿವಿಯ ಭರತ್, ಟಿವಿ9 ನ ಪೃಥ್ವಿರಾಜ್ ಹಾಗೂ ರಾಜೇಶ್ ಕೆ ಪೂಜಾರಿ, ವಿಸ್ತಾರ ಟಿವಿಯ ರಾಜೇಶ್ ಹಾಗೂ ಲಕ್ಷ್ಮಣ್, ಬಿಟಿವಿಯ ಶರತ್, ಸೇರಿ ಮರ ಕಡಿದು ರಸ್ತೆ ತೆರವುಗೊಳಿಸಿದ್ದಾರೆ. ಸುಮಾರು ಅರ್ಧ ಘಂಟೆಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ತುಂಡರಿಸಿ ವಾಹನ ಸವಾರರು ನೆಮ್ಮದಿಯಲ್ಲಿ ಪ್ರಯಾಣಿಸುವಂತೆ ಮಾಡಿದ್ದಾರೆ. ಅರ್ಧ ಘಂಟೆಯಲ್ಲಿ ಸಾಕಷ್ಟು ವಾಹನಗಳು ರಸ್ತೆಯ ಉದ್ದಕ್ಕೂ ಸಾಲುಗಟ್ಟಿ ನಿಂತಿದ್ದು ಮರ ತೆರವಾದ ಬಳಿಕ ಸುಬ್ರಹ್ಮಣ್ಯ ಕಡೆಗೆ ತೆರಳಿದೆ. ಮಾದ್ಯಮದವರು ರಸ್ತೆ ತೆರವು ಮಾಡಿದ ಬಗ್ಗೆ ಪ್ರಯಾಣಿಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
