ಕಾಸರಗೋಡು ಶಾಲೆಯಲ್ಲಿ ಕನ್ನಡಕ್ಕಾಗಿ ಹೋರಾಟ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾ ನೆನಪಿಸುವ ನೈಜ ದೃಶ್ಯ

ಕನ್ನಡ ಸರಿಯಾಗಿ ಬಾರದ ಶಿಕ್ಷಕಿಯೋರ್ವರನ್ನು ಕನ್ನಡ ಮಾಧ್ಯಮ ಶಾಲೆಗೆ ನಿಯುಕ್ತಿಗೊಳಿಸಿರುವುದನ್ನು ವಿರೋಧಿಸಿ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಅಡೂರು ಸರಕಾರಿ ಶಾಲೆಯಲ್ಲಿ ನಡೆದಿದೆ.

ಇತ್ತೀಚೆಗೆ ಈ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗೆ ಬೇರೆ ಶಾಲೆಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಕೇರಳ ಶಿಕ್ಷಣ ಇಲಾಖೆ ಆ ಜಾಗಕ್ಕೆ ಹೊಸ ಶಿಕ್ಷಕಿಯೋರ್ವರನ್ನು ನೇಮಿಸಿದೆ. ಆದರೆ ಈ ಶಿಕ್ಷಕಿಗೆ ಕನ್ನಡ ಸರಿಯಾಗಿ ಬರುತ್ತಿಲ್ಲ ಎಂದು ಆರೋಪಿಸುತ್ತಿರುವ ವಿದ್ಯಾರ್ಥಿಗಳು ನಮಗೆ ಕನ್ನಡ ಶಿಕ್ಷಕಿ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಕನ್ನಡ ಮತ್ತು ಮಲಯಾಳಂ ಮಾದ್ಯಮದ ಪ್ರತ್ಯೇಕ ಶಾಲೆ ಇಲ್ಲಿ ನಡೆಯುತ್ತಿದ್ದು, ಕನ್ನಡ ಮಾದ್ಯಮದಲ್ಲಿ ಸುಮಾರು 350 ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿಗೆ ನೇಮಕಗೊಂಡ ಶಿಕ್ಷಕಿ ಕನ್ನಡವನ್ನು ತಪ್ಪು ತಪ್ಪಾಗಿ ಉಚ್ಚರಿಸುತ್ತಾರೆ. ಪಠ್ಯವನ್ನು ಕನ್ನಡದ ಬದಲು ಮಲಯಾಳಂನಲ್ಲೇ ಕಲಿಸುತ್ತಿದ್ದು, ನಮಗೆ ಸ್ವಲ್ಪವೂ ಅರ್ಥವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.

10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅರ್ಥವಾಗದ ಭಾಷೆಯಲ್ಲಿ ಸಮಾಜ ವಿಜ್ಞಾನವನ್ನು ಭೋಧಿಸಲಾಗುತ್ತಿದ್ದು, ಶಿಕ್ಷಕಿಯ ಪಾಠವನ್ನು ಅರ್ಥೈಸಿಕೊಳ್ಳದೆ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.

ಸಮಸ್ಯೆಯನ್ನು ಪರಿಹರಿಸುವಂತೆ ಪೋಷಕರು ಹಲವು ಬಾರಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಾಗೂ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ, ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಣ ಇಲಾಖೆ ಮತ್ತು ಕೇರಳ ಸರಕಾರದ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.

ಈ ಹಿಂದೆಯೂ ಕೇರಳ ಸರಕಾರ ಇದೇ ರೀತಿಯ ತಂತ್ರವನ್ನು ಅಳವಡಿಸಿ ಕೊನೆಗೆ ಕನ್ನಡ ಮಾಧ್ಯಮ ಶಾಲೆಗಳನ್ನೇ ಮುಚ್ಚಲು ಯತ್ನಿಸಿದ್ದು, ಇದರ ಮುಂದಿನ ಭಾಗ ಇದಾಗಿದೆ ಎನ್ನುವುದು ಪ್ರತಿಭಟನಾನಿರತರ ಆರೋಪವಾಗಿದೆ.

Related Posts

Leave a Reply

Your email address will not be published.