ಕಾಪು: ಸ್ಕೂಟರ್ – ಕಾರು ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟು ಕಾರು ಚಾಲಕ ಗಾಯಗೊಂಡ ಘಟನೆ ಭಾನುವಾರ ಸಂಜೆ ಕಾಪು ಕೆ1 ಹೋಟೆಲ್ ಎದುರುಗಡೆ ಇರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಘಟನೆ ನಡೆದಿದೆ.
ಮೃತ ಪಟ್ಟ ಸ್ಕೂಟರ್ ಸವಾರ ಮೂಳೂರು ನಿವಾಸಿ ಮಯ್ಯದ್ದಿ (60) ಎಂದು ಗುರುತಿಸಲಾಗಿದ್ದು, ಇವರು ಕಾಪು ಪೇಟೆಯಿಂದ ಬಂದು ಕೆ1 ಹೊಟೇಲ್ ಮುಂಭಾಗ ರಾಹೆ 66 ರಲ್ಲಿ ಯೂಟನ್೯ ತೆಗೆದುಕೊಳ್ಳುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣ ಜಖಂಗೊಂಡು ಕಾರಿನ ಮುಂಭಾಗ ಜಖಂಗೊಂಡಿದೆ. ಸ್ಕೂಟರ್ ಡಿಕ್ಕಿಯಾದ ಸಂದರ್ಭ ಸವಾರನ ಹೆಲ್ಮೆಟ್ ಕಾರಿನ ಗಾಜಿನಲ್ಲಿ ಸಿಲುಕಿಕೊಂಡಿತ್ತು. ಕಾರಿನ ಏರ್ ಬ್ಯಾಗ್ ತೆರೆದು ಕೊಂಡು ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣ ಘಟನೆ ನಡೆದ ಸ್ಥಳಕ್ಕೆ ಉಚ್ಚಿಲದ ಸಮಾಜ ಸೇವಕ ಜಲಾಲುದ್ದೀನ್ ಮತ್ತು ಹಮೀದ್ ರವರು ಎಸ್ಡಿಪಿಐ ಅಂಬುಲೆನ್ಸ್ ನಲ್ಲಿ ಸ್ಕೂಟರ್ ಸವಾರನನ್ನು ಆಸ್ಪತ್ರೆಗೆ ಸಾಗಿಸಿದರಾದರೂ ದಾರಿ ಮಧ್ಯೆ ಮಯ್ಯದಿ ಮೃತ ಪಟ್ಟಿದ್ದು, ಗಾಯಗೊಂಡ ಕಾರು ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


