ವಿಟ್ಲ : ಬಾಲವಿಕಾಸದಲ್ಲಿ ಮಕ್ಕಳ ದಿನದ ಸಂಭ್ರಮಾಚರಣೆ

ವಿಟ್ಲ : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯoತ ಸಂಭ್ರಮದಿಂದ ಆಚರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ ಇವರು ಮಾತನಾಡಿ, “ಸತತ ಪ್ರಯತ್ನದಿಂದ ಸಾಧನೆ ಸಾಧ್ಯ. ಮಕ್ಕಳ ದಿನಾಚರಣೆ ಎಂಬುದು ಒಂದು ಸಾಮೂಹಿಕ ಹುಟ್ಟುಹಬ್ಬ. ಪಂಡಿತ್ ಜವಾಹರ್ ಲಾಲ್ ನೆಹರೂರವರ ಜೀವನಾದರ್ಶಗಳನ್ನು ಮಕ್ಕಳು ಮೈಗೂಡಿಸಿಕೊಂಡಾಗ ಮಕ್ಕಳ ದಿನದ ಆಚರಣೆ ಅರ್ಥಪೂರ್ಣವಾಗುತ್ತದೆ ” ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಬಜ್ಪೆಯ ಪಾಪ್ಯುಲರ್ ಬಂಟ್ಸ್ ಇಂಗ್ಲೀಷ್ ಮೀಡಿಯಂ ಶಾಲೆಯ ಕಾರ್ಯದರ್ಶಿ ಗೋಪಿನಾಥ್ ಹೆಗ್ಡೆ ಶಾಲಾ ಪತ್ರಿಕೆ ‘ವಿಕಾಸ ಪಥ’ವನ್ನು ಬಿಡುಗಡೆಗೊಳಿಸಿ “ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಮತ್ತು ಹೆತ್ತವರು ಮಕ್ಕಳಿಗೆ ಮಾದರಿಯಾಗಿರಬೇಕು. ಮಕ್ಕಳು ತಮಗೆ ಆದರ್ಶಪ್ರಾಯರಾಗಿರುವ ಹೆತ್ತವರ ನೋವು -ನಲಿವುಗಳಿಗೆ ಸ್ಪಂದಿಸಿ ಒಳಿತಿನೆಡೆಗೆ ಮುನ್ನಡೆಯಬೇಕು. ಇಂತಹ ಆದರ್ಶ ಶಿಕ್ಷಣ ವ್ಯವಸ್ಥೆ ಬಾಲವಿಕಾಸ ಶಾಲೆಯಲ್ಲಿದೆ. ‘ವಿಕಾಸ ಪಥ’ ಎಂಬ ಶಾಲಾ ಪತ್ರಿಕೆ ಬಾಲವಿಕಾಸದ ಮಕ್ಕಳು ಪಡೆದುಕೊಂಡ ಉತ್ತಮ ಶಿಕ್ಷಣವನ್ನು ಪ್ರತಿಬಿಂಬಿಸುತ್ತದೆ” ಎಂದರು.

ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇನ್ನೋರ್ವ ಮುಖ್ಯ ಅತಿಥಿ, ಶಾಲೆಯ ಹಿರಿಯ ವಿದ್ಯಾರ್ಥಿನಿ ಡಾI ಪ್ರತೀಕ್ಷಾ ರೈ ಬಾಲವಿಕಾಸದಲ್ಲಿ ತಾವು ಕಳೆದ ಬಾಲ್ಯದ ಸವಿ ನೆನಪುಗಳನ್ನು ತಮ್ಮ ಮಾತುಗಳಲ್ಲಿ ಮೆಲುಕು ಹಾಕುತ್ತಾ “ಈಗಿನ ನೂತನ ಬಾಲವಿಕಾಸ ಶಾಲೆ ಸುಸಜ್ಜಿತ ವ್ಯವಸ್ಥೆಯೊಂದಿಗೆ ಈ ಹಳ್ಳಿಯ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ತಮ್ಮಂತಹ ಹಿರಿಯ ವಿದ್ಯಾರ್ಥಿಗಳಿಗೆ ಹೆಮ್ಮೆಯ ವಿಚಾರ. ಸುಸಜ್ಜಿತವಾದ ನೂತನ ಬಾಲವಿಕಾಸ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದರ ಮೂಲಕ ಮಾಣಿ ಪರಿಸರದಲ್ಲಿ ಜನಜನಿತವಾಗಿರುವುದಕ್ಕೆ ಹಲವಾರು ನಿದರ್ಶನಗಳಿವೆ” ಎಂದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ಸುಭಾಷಿಣಿ ಎ ಶೆಟ್ಟಿ,ಶಾಲಾ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ ಹಾಗೂ ಶಾಲಾ ನಾಯಕಿ ಪ್ರೇಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಶುಭ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ತಯಾರಾದ ಶಾಲಾ ಮ್ಯಾಗಝಿನ್ ‘ವಿಕಾಸ ಪಥ’ ವನ್ನು ಬಿಡುಗಡೆಗೊಳಿಸಲಾಯಿತು. 2023-24ನೇ ಶೈಕ್ಷಣಿಕ ಸಾಲಿನ ಶಾಲಾ ಮಟ್ಟದ ‘ವಿಕಾಸೋತ್ಸವ ‘ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಈ ಸಂದರ್ಭದಲ್ಲಿ ಜರುಗಿತು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ವರ್ಗದವರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿತು. ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ ಹಾಗೂ ಅವರ ಕುಟುಂಬದ ಸದಸ್ಯರು,ಪೋಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಹಿತೈಷಿಗಳು ಭಾಗವಹಿಸಿದ್ದರು.

ಶಾಲಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವನ್ನು ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ ಸ್ವಾಗತಿಸಿ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ ಶೆಟ್ಟಿ ವಂದಿಸಿ, ಶಿಕ್ಷಕಿಯರಾದ ಸುಧಾ ಎನ್ ರಾವ್ ಹಾಗೂ ಯಜ್ಞೇಶ್ವರಿ ನಿರೂಪಿಸಿದರು.

Related Posts

Leave a Reply

Your email address will not be published.