ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಮತದಾರರ ಸಾಕ್ಷರತಾ ಸಂಘದ ಉದ್ಘಾಟನೆ

ಯುವತಲೆಮಾರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥೈಸಿಕೊಂಡು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಮತದಾರರ ಸಾಕ್ಷರತಾ ಸಂಘದ ಬೆಳ್ತಂಗಡಿ ತಾಲೂಕು ನೋಡಲ್ ಅಧಿಕಾರಿ ಶುಭಾ ಪೌಲ್ ಹೇಳಿದರು.

ಉಜಿರೆಯ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಮತದಾರರ ಸಾಕ್ಷರತಾ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನೈತಿಕಪ್ರಜ್ಞೆಯಿಂದ ಮತವನ್ನು ಚಲಾಯಿಸುವ ಮೂಲಕ ಜವಾಬ್ದಾರಿಯುತ ನಾಯಕನನ್ನು ಆಯ್ಕೆ ಮಾಡಬಹುದು. ಮತದಾನದ ಕುರಿತಂತೆ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು. ವಿದ್ಯಾರ್ಥಿಗಳು ಮತದಾನ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಗ್ರಹಿಸಿ ಕುಟುಂಬದ ಸದಸ್ಯರಿಗೂ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಜಿರೆಯ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎನ್ ಕೆ ಪದ್ಮನಾಭ ಅವರು ಯುವಸಮೂಹ ದೇಶದ ಕುರಿತಾದ ಪ್ರಜ್ಞಾಪೂರ್ವಕ ಅಭಿಮಾನದಿಂದ ಮತ ಚಲಾಯಿಸಿದಾಗ ಸಂವಿಧಾನದ ತತ್ವಾಶಯಗಳಿಗೆ ಜೀವಂತಿಕೆ ನೀಡಬಹುದು ಎಂದರು.

ಜೊತೆಗೆ ಯುವಜನತೆ ಹೊಸತುಗಳ ಜೊತೆ ಒಡನಾಡುವ ಆಲೋಚನೆಯನ್ನು ಬೆಳೆಸಿಕೊಂಡಾಗ ದೇಶದಲ್ಲಿ ಅಮೂಲಾಗ್ರ ಬದಲಾವಣೆ ತರಬಹುದು. ವಿವೇಚನೆಯಿಂದ ಅರ್ಹ ಅಭ್ಯರ್ಥಿಗೆ ಮತದಾನ ಮಾಡಿದಾಗ ಚಲಾಯಿಸಿದ ಮತಕ್ಕೆ ಮನ್ನಣೆ ಸಿಗುವುದಲ್ಲದೆ ಪ್ರಜಾಪ್ರಭುತ್ವದ ಬೌದ್ಧಿಕ ಸೌಂದರ್ಯವನ್ನು ಮತ್ತಷ್ಟು ವಿಸ್ತರಿಸಬಹುದು

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಎನ್. ದಿನೇಶ್ ಚೌಟ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ತಾಲೂಕು ನೋಡಲ್ ಅಧಿಕಾರಿ ಶುಭಾ ಪೌಲ್ ” ವಾಲ್ ಆಫ್ ಡೆಮೋಕ್ರಸಿ” ಯನ್ನು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಕಾಲೇಜು ಮತದಾರರ ಸಾಕ್ಷರತ ಸಂಘದ ವಿದ್ಯಾರ್ಥಿ ಪದಾಧಿಕಾರಿಗಳಾದ ಪ್ರಜ್ವಲ್ ಸಿ ವಿ, ಮದನ್ ಎಂ, ಮಾನಸ ಅಗ್ನಿಹೋತ್ರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಪ್ರಜ್ವಲ್ ಸಿ. ವಿ ನಿರೂಪಿಸಿದರು.ಉಪನ್ಯಾಸಕಿ ದಿವ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಪನ್ಯಾಸಕಿ ಪದ್ಮಶ್ರೀ ವಂದಿಸಿದರು..

 

Related Posts

Leave a Reply

Your email address will not be published.