ಮಂಗಳೂರಿನಲ್ಲಿ ಮಳೆಯ ಅವಾಂತರ: ತಡೆಗೋಡೆ ಕುಸಿದು ದ್ವಿಚಕ್ರ ವಾಹನಗಳು ಜಖಂ
ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಅವಾಂತರವನ್ನೇ ಸೃಷ್ಟಿಸುತ್ತಿದೆ. ತಡೆಗೋಡೆ ಕುಸಿದು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ 13ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಜಖಂ ಗೊಂಡಿರುವ ಘಟನೆ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆ ಸಮೀಪ ನಡೆದಿದೆ.
ಪ್ಲಾಟ್ ಬಳಿ ತಡೆಗೋಡೆ ಶಿಥಿಲವಾಗಿದ್ದು, ಸುರಿದ ಭಾರೀ ಮಳೆಯಿಂದ ಕುಸಿದಿದೆ. ಈ ವೇಳೆ ಯಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಗಳ ಮೇಲೆ ಗೋಡೆಯ ಕಲ್ಲುಗಳು ಬಿದ್ದ ಹಿನ್ನೆಲೆಯಲ್ಲಿ ವಾಹನ ಗಳು ಜಖಂಗೊಂಡಿವೆ. ಇನ್ನು ತಡೆಗೋಡೆಯ ಅವಶೇಷಗಳು ಅಪಾರ್ಮೆಂಟ್ ಉದ್ದಕ್ಕೂ ಬಿದ್ದಿದೆ. ಈ ವೇಳೆಯಲ್ಲಿ ಮಕ್ಕಳು ಆಟ ವಾಡುತ್ತಿದ್ದು, ಅವರೆಲ್ಲರೂ ಓಡಿ ಭಾರೀ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇದೀಗ ಇತರ ಕಾಮಗಾರಿಯ ಅವಶೇಷಗಳನ್ನು ತಂದು ಇಲ್ಲಿ ಸುರಿಯಲಾಗುತ್ತಿತ್ತು.ಇದರಿಂದಾಗಿ ತಡೆಗೋಡೆ ಶಿಥಿಲವಾಗಿದ್ದು, ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.