ಮಂಗಳೂರು, ಸೆಪ್ಟೆಂಬರ್ 5, 2026: ಝೀ ಕನ್ನಡದ ಸರೆಗಮಪ ಲಿಟಲ್ ಚಾಂಪ್ಸ್ 2026 ರಿಯಾಲಿಟಿ ಶೋನ ವಿಜೇತ ಹಾಗೂ ಸಂತ ಅಲೋಶಿಯಸ್ ಗೋನ್ಝಾಗ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಅಶ್ಮಿತ್ ಎ. ಜೆ. ಅವರನ್ನು ಶನಿವಾರ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ., ಉಪಪ್ರಾಂಶುಪಾಲರು ಹಾಗೂ ಶೈಕ್ಷಣಿಕ ಸಂಯೋಜಕರು ಅಶ್ಮಿತ್ ಅವರನ್ನು ಸನ್ಮಾನಿಸಿದರು. ಚೆಂಡೆ ವಾದ್ಯದೊಂದಿಗೆ ನಡೆದ ಪಲ್ಲಕ್ಕಿ ಮೆರವಣಿಗೆಯ ಮೂಲಕ ಅಶ್ಮಿತ್ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಬಾಲ್ಯದಿಂದ ಆರಂಭವಾದ ಅವರ ಸಂಗೀತ ಪಯಣವನ್ನುದಾಖಲಿಸಿರುವ ವಿಶೇಷ ವಿಡಿಯೋವನ್ನೂ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ಮಿತ್, ತಮ್ಮ ನಿರಂತರ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಶಾಲೆಗೆ ಕೃತಜ್ಞತೆ ಸಲ್ಲಿಸಿದರು. ವಿಶೇಷವಾಗಿ, ರಿಯಾಲಿಟಿ ಶೋನಲ್ಲಿ ಭಾಗವಹಿಸುವುದರ ಜೊತೆಗೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಅನುಕೂಲವಾಗುವಂತೆ ಹಾಜರಾತಿ ಮತ್ತು ಪರೀಕ್ಷೆಗಳ ವಿಷಯದಲ್ಲಿ ಸಹಕಾರ ನೀಡಿದ ಪ್ರಾಂಶುಪಾಲರ ಬೆಂಬಲವನ್ನು ಅವರು ಸ್ಮರಿಸಿದರು.
ತಮ್ಮ ಗಾಯನ ಪ್ರತಿಭೆಯನ್ನು ಶಾಲೆಯು ಮೊದಲನೇ ತರಗತಿಯಲ್ಲಿಯೇ ಗುರುತಿಸಿ, ವಿವಿಧ ಶಾಲಾ ಕಾರ್ಯಕ್ರಮಗಳಲ್ಲಿ ಹಾಡಲು
ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು ಎಂದು ಅಶ್ಮಿತ್ ತಿಳಿಸಿದರು. ಈ ಅವಕಾಶಗಳು ತಮ್ಮ ಸಂಗೀತ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಬಹಳಷ್ಟು ಸಹಾಯ ಮಾಡಿವೆ ಎಂದರು.
ಸ್ಪರ್ಧೆಯ ಸಂದರ್ಭದಲ್ಲಿ ಅಶ್ಮಿತ್ ಅವರ ಮಾರ್ಗದರ್ಶಕರಾಗಿದ್ದ ಖ್ಯಾತ ಗಾಯಕಿ ಇಂದು ನಾಗರಾಜ್ ಅವರು ಅಶ್ಮಿತ್ ಅವರನ್ನು ಪ್ರತಿಭಾವಂತ, ವಿನಯಶೀಲ ಹಾಗೂ ಶಿಸ್ತಿನ ವಿದ್ಯಾರ್ಥಿ ಎಂದು ಬಣ್ಣಿಸಿದರು. ನೀಡಿದ ತಿದ್ದುಪಡಿಗಳನ್ನು ಸ್ವೀಕರಿಸುವ ಗುಣ,ಸೂಚನೆಯಂತೆ ಶ್ರದ್ಧೆಯಿಂದ ಅಭ್ಯಾಸ ಮಾಡುವ ಮನೋಭಾವ ಹಾಗೂ ವಿಧೇಯತೆಯನ್ನು ಅವರು ಪ್ರಶಂಸಿಸಿದರು. ಅಶ್ಮಿತ್ರಿ ಯಾಲಿಟಿ ಶೋನಲ್ಲಿ ಭಾಗವಹಿಸಿ ಗೆಲ್ಲಲು ಶಾಲೆಯ ಪ್ರಾಂಶುಪಾಲರು ನೀಡಿದ ಬೆಂಬಲ, ವಿಶೇಷವಾಗಿ ಹಾಜರಾತಿ ಮತ್ತು
ಪರೀಕ್ಷೆಗಳ ವಿಷಯದಲ್ಲಿ ನೀಡಿದ ಸೌಲಭ್ಯವು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಅಶ್ಮಿತ್ ಅವರ ತಂದೆ ಶ್ರೀ ಜಯರಾಮ್ ಎ. ಅವರು ತಮ್ಮ ಮಗನ ಪ್ರತಿಭೆಯನ್ನು ಗುರುತಿಸಿ ಬೆಳೆಸಿದ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ತಮ್ಮ ಮಗನ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಅಗತ್ಯವಾದ ವೇದಿಕೆ ಮತ್ತು ಅವಕಾಶಗಳನ್ನು ಒದಗಿಸುವಂತಹ ಶಿಕ್ಷಣ ಸಂಸ್ಥೆಯ ಭಾಗವಾಗಿರುವುದು ಅಶ್ಮಿತ್ ಅವರ ಅದೃಷ್ಟ ಎಂದು ಅವರು ಹೇಳಿದರು.
ನಂತರ ಅಶ್ಮಿತ್ ಸಭಿಕರಿಗಾಗಿ ಸುಂದರವಾದ ಹಾಡೊಂದನ್ನು ಹಾಡಿ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಭರ್ಜರಿ ಮೆಚ್ಚುಗೆ ಮತ್ತು ಕರತಾಡನವನ್ನು ಪಡೆದರು.
ಅಶ್ಮಿತ್ ಅವರನ್ನು ಅಭಿನಂದಿಸಿದ ವಂ. ಫಾ.ರೋಹನ್ ಡಿ’ಅಲ್ಮೇಡಾ ಎಸ್.ಜೆ. ಅವರು ಅವರ ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ಶುಭ ಹಾರೈಸಿದರು. ವಿದ್ಯಾಭ್ಯಾಸ ಮತ್ತು ಸಂಗೀತ ಎರಡರಲ್ಲೂ ಸಮತೋಲನ ಕಾಯ್ದುಕೊಂಡು ತಮ್ಮ ಸಂಗೀತ ಆಸಕ್ತಿಯನ್ನು ಮುಂದುವರಿಸುವಂತೆ ಪ್ರೋತ್ಸಾಹಿಸಿದರು.
ಅಶ್ಮಿತ್ ಅವರ ಈ ಸಾಧನೆಯು ಗೊನ್ಝಾಗ ಶಾಲೆಯ ಮೊದಲನೇ ತರಗತಿಯಿಂದ ಆರಂಭವಾದ ಅವರ ಸಂಗೀತ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಸಮಯೋಚಿತವಾಗಿ ಗುರುತಿಸಿ, ಸೂಕ್ತ ಪ್ರೋತ್ಸಾಹ ಮತ್ತು ಅವಕಾಶಗಳನ್ನು ನೀಡಿದಾಗ ಅವರು ಹೇಗೆ ಸಾಧನೆಯ ಶಿಖರಕ್ಕೇರಬಹುದು ಎಂಬುದಕ್ಕೆ ಅಶ್ಮಿತ್ ಅವರ ಪಯಣ ಉತ್ತಮ ಉದಾಹರಣೆಯಾಗಿದೆ.

