ಪಡುಬಿದ್ರಿ, ಆ. 10: ಪಾದೆಬೆಟ್ಟುವಿನ ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ, ಶ್ರೀ ದುರ್ಗಾದೇವಿ ಸನ್ನಿಧಿಯಲ್ಲಿ ಶ್ರೀ ಕಾಳಿಕಾಂಬಾ ಮಹಿಳಾ ಮಂಡಳಿಯ ವತಿಯಿಂದ ‘ಆಟಿಯ ಐಸಿರಿ’ ಕಾರ್ಯಕ್ರಮವು ಭಾನುವಾರ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಿಳಾ ಮಂಡಳಿಯ ಸದಸ್ಯರು ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಿ ತಂದಿದ್ದ ಸುಮಾರು 35 ಬಗೆಯ ಆಟಿ ತಿಂಡಿ–ತಿನಿಸುಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಆಟಿಯ ಐಸಿರಿ ವೇದಿಕೆಯಲ್ಲಿ ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಪಾದೆಬೆಟ್ಟು ಅಧ್ಯಕ್ಷ ವಸಂತ ಆಚಾರ್ಯ, ಸಮಾಜ ಸೇವಕಿ ಪ್ರಭಾವತಿ ವಿಶ್ವನಾಥ್ ಉಡುಪಿ, ಉಪಾಧ್ಯಕ್ಷ ವಿಠಲ ಆಚಾರ್ಯ, ಕಾರ್ಯದರ್ಶಿ ಶ್ರೀಧರ್ ಆಚಾರ್ಯ, ಜೊತೆ ಕಾರ್ಯದರ್ಶಿ ಸುಬ್ರಾಯ ಆಚಾರ್ಯ, ಕೋಶಾಧಿಕಾರಿ ವಾಮನ ಆಚಾರ್ಯ, ಗಾಯತ್ರಿ ಭಜನಾ ಮಂಡಳಿ ಅಧ್ಯಕ್ಷ ಜಿ. ಹರೀಶ್ ಆಚಾರ್ಯ, ಅಶ್ವಥ್ ಆಚಾರ್ಯ, ಶ್ರೀ ಕಾಳಿಕಾಂಬಾ ಮಹಿಳಾ ಮಂಡಳಿ ಅಧ್ಯಕ್ಷೆ ಜ್ಯೋತಿ ಪ್ರಶಾಂತ್ ಆಚಾರ್ಯ, ಸುಮಿತ್ರ ಸುಬ್ರಾಯ ಆಚಾರ್ಯ ಹಾಗೂ ಶಾಂತ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಟಿ ತಿಂಗಳ ವಿಶೇಷತೆ, ಸಾಂಪ್ರದಾಯಿಕ ಆಟಿ ಆಹಾರ ಪದ್ಧತಿ ಹಾಗೂ ಅದರ ಮಹತ್ವದ ಕುರಿತು ಸಮಾಜ ಸೇವಕಿ ಪ್ರಭಾವತಿ ವಿಶ್ವನಾಥ್ ಉಡುಪಿ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ಬಳಿಕ ಅವರನ್ನು ಶ್ರೀ ಕಾಳಿಕಾಂಬಾ ಮಹಿಳಾ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಾರ್ಥನೆಯನ್ನು ವಾಮನ ಆಚಾರ್ಯ ನೆರವೇರಿಸಿದರು. ಶ್ರೀಧರ್ ಆಚಾರ್ಯ ಸ್ವಾಗತ, ನಿರೂಪಣೆ ಹಾಗೂ ಧನ್ಯವಾದ ಸಮರ್ಪಿಸಿದರು.
ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು ಹಾಗೂ ಊರ–ಪರವೂರಿನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು


