ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್ಜೆಇಸಿ) ಕೃತಕ ಬುದ್ಧಿಮತ್ತೆ ಶಿಕ್ಷಣ ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಇಂಟೆಲ್® ಉನ್ನತಿ ಕೃತಕ ಬುದ್ಧಿಮತ್ತೆ (ಎಐ) ಪ್ರಯೋಗಾಲಯವನ್ನು ಉದ್ಘಾಟಿಸಿ, “ಇಂಟೆಲ್ ಉನ್ನತಿ ಎಐ ಉಪಕರಣಗಳು ಮತ್ತು ಫ್ರೇಮ್ವರ್ಕ್ಗಳ ಮೂಲಕ ಯಂತ್ರ ಕಲಿಕೆ ಹಾಗೂ ಆಳವಾದ ಕಲಿಕೆ” ವಿಷಯದ ಐದು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಕ್ಕೆ (ಎಫ್ಡಿಪಿ)
ಚಾಲನೆ ನೀಡಿತು.


ಕಾಲೇಜಿನ ಇಂಟೆಲಿಜೆಂಟ್ ಕಂಪ್ಯೂಟಿಂಗ್ ಮತ್ತು ಬಿಸಿನೆಸ್ ಸಿಸ್ಟಮ್ಸ್ (ಐಸಿಬಿಎಸ್) ವಿಭಾಗದಲ್ಲಿ ಸ್ಥಾಪಿಸಲಾದ ಈ ಅತ್ಯಾಧುನಿಕ ಪ್ರಯೋಗಾಲಯವನ್ನು ಇಂಟೆಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ರಾಷ್ಟ್ರೀಯ ವ್ಯವಸ್ಥಾಪಕರಾದ ಶ್ರೀ ಗೋವಿಂದ್ ಅಗರ್ವಾಲಾ ಉದ್ಘಾಟಿಸಿದರು. ಏಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸಹನಿರ್ದೇಶಕರಾದ ಶ್ರೀ ರವಿಕುಮಾರ್ ಜೆ. ಹಾಗೂ ಕರ್ನಾಟಕ ಮತ್ತು ಕೇರಳ ಮಾರಾಟ ವ್ಯವಸ್ಥಾಪಕರಾದ ಶ್ರೀ ಹರ್ಷನ್ ಪಿ.ಎಚ್. ಗೌರವ
ಅತಿಥಿಗಳಾಗಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಗೋವಿಂದ್ ಅಗರ್ವಾಲಾ, ಇಂಟೆಲ್ನ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳು, ಪ್ರಮಾಣಪತ್ರ ಅವಕಾಶಗಳು ಹಾಗೂ ಜಾಗತಿಕ ಎಐ ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು. ಶ್ರೀ ರವಿಕುಮಾರ್ ಜೆ. ಅವರು ಆಧುನಿಕ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಎಐ ಮೂಲಸೌಕರ್ಯದ ಮಹತ್ವವನ್ನು ವಿವರಿಸಿ,
ಏಸರ್ನ ತಂತ್ರಜ್ಞಾನ ವಿದ್ಯಾರ್ಥಿಗಳ ಕಲಿಕೆ ಮತ್ತು ಸಂಶೋಧನೆಗೆ ನೆರವಾಗಲಿದೆ ಎಂದು ಹೇಳಿದರು.



ಅಧ್ಯಕ್ಷತೆ ವಹಿಸಿದ್ದ ಎಸ್ಜೆಇಸಿ ನಿರ್ದೇಶಕರಾದ ವಂ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇಂಟೆಲ್ ಉನ್ನತಿ ಎಐ ಪ್ರಯೋಗಾಲಯವನ್ನು ಹೊಂದಿರುವ ಪ್ರಥಮ ಎಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಗೆ ಎಸ್ಜೆಇಸಿ ಪಾತ್ರವಾಗಿದೆ ಎಂದು ತಿಳಿಸಿದರು. ಡಾ. ಶ್ರೀರಂಗ ಭಟ್ ಸ್ವಾಗತಿಸಿದರು. ಡಾ. ಹರಿವಿನೋದ್ ಎನ್. ವಂದಿಸಿದರು. ಈ ಐದು ದಿನಗಳ ಎಫ್ಡಿಪಿಯಲ್ಲಿ ವಿವಿಧ ಸಂಸ್ಥೆಗಳ ಅಧ್ಯಾಪಕರು ಭಾಗವಹಿಸಿದ್ದು, ಯಂತ್ರ ಕಲಿಕೆ ಮತ್ತು
ಆಳವಾದ ಕಲಿಕೆಯ ಕ್ಷೇತ್ರಗಳಲ್ಲಿ ಪ್ರಾಯೋಗಿಕ ತರಬೇತಿ ಪಡೆಯಲಿದ್ದಾರೆ.

