ಕಾಸರಗೋಡು: ನಗರದ ಹೃದಯ ಭಾಗದ ಪುಲಿಕುನ್ನುವಿನಲ್ಲಿರುವ ಕಾಸರಗೋಡು ಡಯಲೈಫ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನ್ಯೂರೋಲಜಿ, ಕ್ಯಾನ್ಸರ್ ವಿಭಾಗ ಹಾಗೂ ವೆರ್ಟಿಗೋ ಲ್ಯಾಬ್ ಸೌಲಭ್ಯವನ್ನು ಸೋಮವಾರ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಮೇಶ್ ಚೆನ್ನಿತ್ತಲ ಅವರು, ಪ್ರಸ್ತುತ ಆಧುನಿಕ ವೈದ್ಯಕೀಯ ಸೌಲಭ್ಯಗಳಿಗೆ ಜಿಲ್ಲೆಯ ಹೆಚ್ಚಿನ ಜನರು ಮಂಗಳೂರು ನಗರವನ್ನು ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿಯೇ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಡಯಲೈಫ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ವರ್ಗದ ಪ್ರಯತ್ನ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ ಬಳಿಕ ಜನರು ಎದುರಿಸುವ ಆರೋಗ್ಯ ಸಮಸ್ಯೆಗಳು ಅಧಿಕಗೊಂಡಿದ್ದು, ಉತ್ತಮ ವೈದ್ಯಕೀಯ ಸೇವೆ ಸುಲಭದಲ್ಲಿ ದೊರೆಯುವುದು ಅಗತ್ಯವಾಗಿದೆ. ವಿಶ್ವಾಸಾರ್ಹ ಪರಂಪರೆ ಹೊಂದಿರುವ ಡಯಲೈಫ್ ಆಸ್ಪತ್ರೆ ಯಿಂದ ಭವಿಷ್ಯದಲ್ಲಿ ಹೆಚ್ಚಿನ ಕೊಡುಗೆಗಳನ್ನು ನಿರೀಕ್ಷಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡ್ರಗ್ಸ್ ವಿರುದ್ಧ ರಾಜ್ಯ ಸರಕಾರ ನಡೆಸುತ್ತಿರುವ ತೂಫಾನ್ ಕಾರ್ಯಾಚರಣೆ ಭಾಗವಾಗಿ ‘ ನೋ ಡ್ರಗ್ಸ್’ ಆಸ್ಪತ್ರೆ ಮಟ್ಟದ ಜಾಗೃತಿ ಕಾರ್ಯಕ್ರಮ ವನ್ನು ಸಚಿವರು ಉದ್ಘಾಟಿಸಿದರು.

ಸ್ಥಳೀಯ ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಕೆಎಂ ಅಶ್ರಫ್, ಗೋವಿಂದನ್ ಪಳ್ಳಿಕಾಪಿಲ್, ಕಾಸರಗೋಡು ನಗರಸಭೆ ಅಧ್ಯಕ್ಷೆ ಶಹೀನಾ ಸಲೀಮ್ ಮುಖ್ಯ ಅತಿಥಿಗಳಾಗಿದ್ದರು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾlಮೊಯ್ದೀನ್ ಕುಂಞಿ ಐ.ಕೆ, ಆಡಳಿತ ಪಾಲುದಾರ ಡಾl ಮೊಯ್ದೀನ್ ನಫ್ಸೀರ್, ಜನರಲ್ ಮ್ಯಾನೇಜರ್ ಮೊಹಮ್ಮದ್ ಮನ್ಸೂರ್, ಆರ್ವಿಆರ್ ಸೂಪರ್ ಸ್ಪೆಶಾಲಿಟಿ ಸೆಂಟರ್ನ ನಿರ್ದೇಶಕ ಡಾ|ರಾಘವೇಂದ್ರ ಬಿ.ಎಸ್, ಆರ್ವಿಆರ್ನ ಅಧ್ಯಕ್ಷ ವಿಜಯ್ ಎಂ.ಎನ್. ಶೆಟ್ಟಿ, ಆರ್ವಿಆರ್ನ ಪ್ರಮುಖ ತಜ್ಞರಾದ ಡಾ| ಅಂಜನ್ ಕುಮಾರ್, ಡಾ|ವಿಘ್ನೇಶ್, ಡಾ.ಅಬೂ ಹಾಗೂ ಸಿಇಇ ಅನಂತ್, ವಿಜೇತ ಉಪಸ್ಥಿತರಿದ್ದರು.

ಡಯಾಲೈಫ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಂಗಳೂರಿನ ಆರ್ವಿಆರ್ ಸೂಪರ್ ಸ್ಪೆಷಾಲಿಟಿ ಸೆಂಟರ್ ಸಯೋಗದಲ್ಲಿ ನರವಿಜ್ಞಾನ ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ತಜ್ಞ ಆರೈಕೆಯ ಸೇವೆಯು ಇಲ್ಲಿ ದೊರೆಯಲಿದೆ.
ಆರ್ವಿಆರ್ ಹೆಲ್ತ್ ಕೇರ್ ಕಾಸರಗೋಡು ನಲ್ಲಿ ನ್ಯೂರೋ- ಆಂಕಾಲಜಿ ಸೆಂಟರ್ ಉದ್ಘಾಟನೆ ಮೂಲಕ ಗುಣಮಟ್ಟದ ‘ಆರೋಗ್ಯ’ ಕಾರ್ಯಕ್ರಮವನ್ನು ವಿಸ್ತರಿಸಿದೆ.
ವೆರ್ಟಿಗೋ ಲ್ಯಾಬ್ (Vertigo Lab) ಎನ್ನುವುದು ತಲೆತಿರುಗುವಿಕೆ (Vertigo) ಮತ್ತು ಸಮತೋಲನ ದೋಷಗಳ ನಿಖರವಾದ ಕಾರಣವನ್ನು ಪತ್ತೆಹಚ್ಚಲು ಬಳಸುವ ವಿಶೇಷ ವೈದ್ಯಕೀಯ ಪರೀಕ್ಷಾ ವ್ಯವಸ್ಥೆ ವೆರ್ಟಿಗೋ ಲ್ಯಾಬ್ ಅನ್ನು ಡಯಲೈಫ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಕಾಸರಗೋಡು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಪರಿಚಯಿಸುತ್ತಿದೆ

