ಮೂಡುಬಿದಿರೆ: ಶಿವರಾಮ ಕಾರಂತ ಪ್ರತಿಷ್ಠಾನ ವ(ರಿ)ಮೂಡುಬಿದಿರೆ ವತಿಯಿಂದ ಕಳೆದ ಮೂರು ದಶಕಗಳಿಂದ ಹಿರಿಯ ಸಾಹಿತಿ ಶಿವರಾಮ ಕಾರಂತರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು ಈ ಸಾಲಿನಲ್ಲಿ ಕೊಡ ಮಾಡುವ ಶಿವರಾಮ ಕಾರಂತ ಪ್ರಶಸ್ತಿಯನ್ನು ನಾಡಿನ ಹಿರಿಯ ವಿದ್ವಾಂಸ ಬೆಳ್ತಂಗಡಿಯ ತಾಳ್ತಜೆ ವಸಂತ ಕುಮಾರ್, ನಾಟಕಗಾರ ಟಿ.ಎನ್ ಸೀತಾರಾಮ್ ಅವರಿಗೆ ಹಾಗೂ ಹಲವು ಸಂಘ, ಸಂಸ್ಥೆಗಳಿಗೆ ಆಸರೆಯಾಗಿ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿಯ ಸೇವೆಯನ್ನು ಮಾಡುತ್ತಾ ಬಂದಿರುವ `ಸಮಾಜ ಮಂದಿರ ಸಭಾ’ ಕ್ಕೆ ಘೋಷಿಸಿದೆ. ಪ್ರಶಸ್ತಿಯು ತಲಾ ರೂ 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.
ಅವರು ಶುಕ್ರವಾರ ಕನ್ನಡ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರತಿ ವರ್ಷದಂತೆ ಈ ವಷ೯ವೂ ಶಿವರಾಮ ಕಾರಂತ ಪುರಸ್ಕಾರಕ್ಕೆ ಕೃತಿಗಳನ್ನು ಆಹ್ವಾನಿಸಲಾಗಿದ್ದು ಉಜಿರೆ ಎಸ್ಡಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಳೆಮನೆ ರಾಜಶೇಖರ ಅವರ ಸೂರ್ಯ ಜಲ' ಕೃತಿ, ಬೆಂಗಳೂರಿನ ವೈದ್ಯೆ ಡಾ.ಕೆ.ಎಸ್ ಚೈತ್ರ ಅವರದಂತ ಕತೆಗಳು’ ಹಾಗು ಗೌರಿಬಿದನೂರು ತಾಲ್ಲೂಕಿನ ಡಾ. ಕಾ. ವೆಂ ಶ್ರೀನಿವಾಸ ಮೂರ್ತಿ ಅವರ ಕನ್ನಡ ಚಿಂತನ' ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ರೂ 5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದರು. ಶಿವರಾಮ ಕಾರಂತ ಕಾದಂಬರಿ’ ಹೆಸರಿನಲ್ಲಿ ಮೂಡುಬಿದಿರೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಪ್ರಥಮ ರೂ 1 ಸಾವಿರ ಮುಖಬೆಲೆಯ ಕನ್ನಡ ಪುಸ್ತಕ, ದ್ವಿತೀಯ ರೂ 750 ಹಾಗೂ ತೃತೀಯ ರೂ 500 ಮುಖಬೆಲೆಯ ಕನ್ನಡ ಪುಸ್ತಕವನ್ನು ವಿಜೇತರಿಗೆ ಬಹುಮಾನವಾಗಿ ನೀಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀಪತಿ ಭಟ್, ಸದಸ್ಯ ರಾಜರಾಮ್ ನಾಗರಟ್ಟೆ ಉಪಸ್ಥಿತರಿದ್ದರು.


