ಕಾಪು, ಆ. 2: ಆಳ್ವಾಸ್ ಎಜುಕೇಶನ್ ಫೌಂಡೇಶನ್ ವತಿಯಿಂದ ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ನಡೆಯಲಿರುವ ‘ಆಳ್ವಾಸ್ ಪ್ರಗತಿ–2026’ ಬೃಹತ್ ಉದ್ಯೋಗ ಮೇಳದ ಅಂಗವಾಗಿ, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರವಿವಾರ ಪೂರ್ವಭಾವಿ ತರಬೇತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ಷೇತ್ರದ ಜೊತೆಗೆ ಸಾವಿರಾರು ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಮಾದರಿಯ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಉದ್ಯೋಗ ಮೇಳಕ್ಕೂ ಮುನ್ನ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಸಜ್ಜುಗೊಳಿಸುವ ಪೂರ್ವಭಾವಿ ತರಬೇತಿ ಅತ್ಯಂತ ಉಪಯುಕ್ತವಾಗಿದ್ದು, ಯುವಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಆಳ್ವಾಸ್ ಎಜುಕೇಶನ್ ಫೌಂಡೇಶನ್ನ ಆಡಳಿತ ನಿರ್ದೇಶಕ ವಿವೇಕ್ ಎಂ. ಆಳ್ವ ಮಾತನಾಡಿ, 30 ಕಂಪನಿಗಳೊಂದಿಗೆ ಆರಂಭಗೊಂಡ ಉದ್ಯೋಗ ಮೇಳ ಇಂದು 350ಕ್ಕೂ ಅಧಿಕ ಕಂಪನಿಗಳ ಪಾಲ್ಗೊಳ್ಳುವಿಕೆಯೊಂದಿಗೆ ದೇಶದ ಪ್ರಮುಖ ಉದ್ಯೋಗ ಮೇಳವಾಗಿ ಬೆಳೆದಿದೆ ಎಂದರು. ಉದ್ಯೋಗಾಕಾಂಕ್ಷಿಗಳಿಗೆ ಸಂದರ್ಶನದ ಸಿದ್ಧತೆ, ರೆಸ್ಯೂಮ್ ತಯಾರಿಕೆ, ಗುಂಪು ಚರ್ಚೆ, ಸಂವಹನ ಕೌಶಲ್ಯ ಹಾಗೂ ವಿವಿಧ ಉದ್ಯೋಗಾವಕಾಶಗಳ ಕುರಿತು ಸಮಗ್ರ ಮಾರ್ಗದರ್ಶನ ನೀಡಿದರು.
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಗೋಪಾಲಕೃಷ್ಣ ಗಾಂವ್ಕರ್ ಶುಭಾಶಂಸನೆ ಸಲ್ಲಿಸಿದರು.
ಆಳ್ವಾಸ್ ಪ್ರಗತಿ–2026 ಉದ್ಯೋಗ ಮೇಳದ ಸಂಯೋಜಕ ಶ್ರೀನಿವಾಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.

