ಕಾಪು: ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಕಾಪು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿ.ಬಿ.ಜಿ ರಾಮ್ ಜಿ ಯೋಜನೆ*ಗೆ ಚಾಲನೆ ನೀಡಲಾಗಿದೆ ಎಂದು ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ *ಶ್ರೀ ವಿಜಯ್ ಕುಮಾರ್ ತಿಳಿಸಿದ್ದಾರೆ
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಯು ಮುಖ್ಯವಾಗಿ 4 ಅಂಶಗಳನ್ನು ಒಳಗೊಂಡಿದೆ ಎಂದು ವಿವರಿಸಿದರು.
ವಿ.ಬಿ.ಜಿ ರಾಮ್ ಜಿ ಯೋಜನೆಯ 4 ಪ್ರಮುಖ ಆಯಾಮಗಳು:
- ಜಲ ಭದ್ರತೆ: ಬೋರ್ವೆಲ್ ರಿಚಾರ್ಜ್ ಪಿಟ್, ಕೃಷಿ ಹೊಂಡ, ಜಲ ಪುನಶ್ಚೇತನ ಮತ್ತು ಪ್ರವಾಹ ನಿಯಂತ್ರಣ ಕಾಮಗಾರಿ
- ಗ್ರಾಮೀಣ ಮೂಲ ಸೌಕರ್ಯ: ಗ್ರಾಮದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಶಾಲೆ, ಅಂಗನವಾಡಿ ಮತ್ತು ಸಮುದಾಯ ಕಟ್ಟಡಗಳ ಅಭಿವೃದ್ಧಿ
- ಗ್ರಾಮೀಣ ಜೀವನೋಪಾಯ: ಕೃಷಿ ಬಾವಿ, ದನದ ಹಟ್ಟಿ, ಕೋಳಿ ಸಾಕಾಣಿಕೆ ಶೆಡ್, ಕುರಿ-ಮೇಕೆ ಶೆಡ್, ಹಂದಿ ಶೆಡ್, ಗೊಬ್ಬರ ಗುಂಡಿ, ಎರೆಹುಳು ತೊಟ್ಟಿ, ತೋಟಗಾರಿಕೆ
- ವಿಪತ್ತು ನಿರ್ವಹಣೆ: ಪ್ರವಾಹ ನಿಯಂತ್ರಣ, ಮಳೆನೀರು ಕೊಯ್ಲು ಮತ್ತು ನೈಸರ್ಗಿಕ ವಿಕೋಪ ತಡೆ ಕಾಮಗಾರಿಗಳು
ಯೋಜನೆಯಡಿ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದಿರುವ ಫಲಾನುಭವಿಗಳು ವೈಯಕ್ತಿಕ ಜೀವನೋಪಾಯ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಬಹುದು. ವಿಶೇಷವಾಗಿ ವಿಪತ್ತು ನಿರ್ವಹಣೆ ಮತ್ತು ಜಲ ಭದ್ರತಾ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಇಒ ಅವರು ಹೇಳಿದರು.
ಯೋಜನೆಯ ಸದುಪಯೋಗವನ್ನು ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ

