ಪುತ್ತೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕುಂಬ್ರ ಬ್ಲಾಕ್ ಸಮಿತಿ ವತಿಯಿಂದ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಸಂಟ್ಯಾರು ಶಾಲಾ ಬಳಿ ಸಂಭ್ರಮ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಯಿತು.
SDPI ಕುಂಬ್ರ ಬ್ಲಾಕ್ ಅಧ್ಯಕ್ಷ ಇರ್ಷಾದ್ ಅರಿಯಡ್ಕ ಧ್ವಜಾರೋಹಣ ನೆರವೇರಿಸಿದರು. SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು ರವರು ಮಾತನಾಡಿ ದೇಶವು ಸ್ವಾತಂತ್ರ್ಯಗೊಂಡು ಇಷ್ಟು ವರ್ಷಗಳಾದರೂ ಇಂದಿಗೂ ಯುವಜನತೆಯು, ರೈತರು , ಮಹಿಳೆಯರು ತಮ್ಮ ಹಕ್ಕಿಗಾಗಿ ಬೀದಿಯಲ್ಲಿದ್ದಾರೆ ಎಂಬುದು ವಿಪರ್ಯಾಸವಾಗಿದೆ, ದೇಶವನ್ನು ಫ್ಯಾಸಿಸಂನ ಕಪಿಮುಷ್ಠಿಯಿಂದ ಸ್ವಾತಂತ್ರ್ಯಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಸಂದೇಶ ಭಾಷಣ ಮಾಡಿದ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ.ಕೆ. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿದರು. ಇಂದು ಸ್ವಾತಂತ್ರ್ಯವೆಂಬ ಹಕ್ಕಿಯ ರೆಕ್ಕೆಗಳನ್ನು ಕಟ್ಟಿಹಾಕಿದಂತಾಗಿದೆ. ಭಯಮುಕ್ತ ಸ್ವಾತಂತ್ರ್ಯ ಹಾಗೂ ಹಸಿವುಮುಕ್ತ ಸ್ವಾತಂತ್ರ್ಯ ಇನ್ನೂ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ. ವಿಚಾರಣಾಧೀನ ಕೈದಿಗಳೆಂಬ ನೆಪದಲ್ಲಿ ಅಮಾಯಕರನ್ನು ಅನ್ಯಾಯವಾಗಿ ಜೈಲಿನಲ್ಲಿಡಲಾಗುತ್ತಿದೆ. ಇದರಿಂದ ಸ್ವಾತಂತ್ರ್ಯದ ಮೂಲ ಉದ್ದೇಶವೇ ಉಲ್ಲಂಘನೆಯಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಯ್ ದೇ ದೇವುಸ್ ಚರ್ಚ್ ಪುತ್ತೂರಿನ ಸಂಟ್ಯಾರು ವಲಯ ಮಾಜಿ ಗುರಿಕ್ಕಾರ ಸುನಿಲ್ ಡಿಸೋಜಾ ರವರು ಮಾತನಾಡಿ ಈ ದೇಶವು ಸರ್ವ ಜನಾಂಗದ ಶಾಂತಿಯ ತೋಟ, ಇಲ್ಲಿ ನಾವೆಲ್ಲರೂ ಭಾರತೀಯರು, ಸಹೋದರರು ನಮ್ಮ ನಡುವೆ ವಿಷಬೀಜ ಬಿತ್ತುವ ಸಮಾಜಘಾತುಕ ಶಕ್ತಿಗಳ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕಾಗಿದೆ, ಈ ಎಚ್ಚರಿಸುವ ಹಾಗೂ ದೇಶದ ಏಕತೆಗೆ ದೇಶದೆಲ್ಲೆಡೆ ಶ್ರಮಿಸುತ್ತಿರುವ ಎಸ್.ಡಿ.ಪಿ.ಐ ಕೆಲಸ ಶ್ಲಾಘನೀಯ ಎಂದರು . ಸಂತ ಫಿಲೋಮಿನಾ ಪ್ರೌಢಶಾಲೆ ಪುತ್ತೂರಿನ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಬಾಬು ಮರಿಕೆರವರು ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು. ಯಂಗ್ ಡೆಮೋಕ್ರಟ್ಸ್ ಜಿಲ್ಲಾ ಓರ್ಗನೈಸಿಂಗ್ ಸಮಿತಿ ಸದಸ್ಯರಾದ ಹಮೀದ್ ಪುತ್ತೂರು ರವರು ಮಾತನಾಡಿ ದೇಶದ ಯುವಜನತೆಯು ಇಂದು ಬೀದಿಗಿಳಿಯಲು ಪ್ರಾರಂಭಿಸಿದ್ದು, Gen-z ಯಿಂದ ಪ್ರಾರಂಭವಾದ ಹೋರಾಟ Gen-alpha ದವರೆಗೆ ಹೋರಾಟದ ಕಿಚ್ಚು ಹಚ್ಚಿದೆ, ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಸರಿಪಡಿಸಬೇಕಾದರೆ ಯುವ ಜನತೆಯು ಒಂದಾಗಲೇ ಬೇಕಾಗಿದೆ ಎಂದರು.
ವೇದಿಕೆಯಲ್ಲಿ ಸಂಟ್ಯಾರು ಶಾಲೆಯ SDMC ಅಧ್ಯಕ್ಷ ಉಮೇಶ್, ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ನಳಿನಿ ಮಲಾರ್, ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಹಾಗೂ WIM ಪುತ್ತೂರು ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ರಶೀದಾ ರಫೀಕ್ , ಬದ್ರಿಯಾ ಜುಮಾ ಮಸೀದಿ ಸಂಟ್ಯಾರು ಕಾರ್ಯದರ್ಶಿ ಹಮೀದ್ ಕಲ್ಲರ್ಪೆ, ಮುಹಿಯುದ್ದೀನ್ ಜಮಾಅತ್ ಕಮಿಟಿ ಸಂಪ್ಯ ಕಾರ್ಯದರ್ಶಿ ಅಬೂಬಕ್ಕರ್ ಕಲ್ಲರ್ಪೆ ,ಸದಸ್ಯರಾದ ನಿಝಾರ್ ಸಂಪ್ಯ, ಅಝೀಝ್ ಸಂಪ್ಯ, SDPI ಕುಂಬ್ರ ಬ್ಲಾಕ್ ಉಪಾಧ್ಯಕ್ಷ ಅಶ್ರಫ್ ಸಂಟ್ಯಾರ್, ಕಾರ್ಯದರ್ಶಿ ಶಾಕಿರ್ ಕಟ್ಟತ್ತಾರ್, SDPI ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷ ಹನೀಫ್ ಕಲ್ಲರ್ಪೆ ಉಪಸ್ಥಿತರಿದ್ದರು. SDPI ಸಂಟ್ಯಾರು ಬ್ರಾಂಚ್ ಸಮಿತಿ ಅಧ್ಯಕ್ಷ ಝಖರಿಯಾ ಸಂಟ್ಯಾರ್ ಸ್ವಾಗತಿಸಿ, ಕಾರ್ಯದರ್ಶಿ ಶಾಫಿ ಮರಿಕೆ ಧನ್ಯವಾದಗೈದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹಮೀದ್ ಪುತ್ತೂರಿಗೆ ಸನ್ಮಾನ
ಯಂಗ್ ಡೆಮೋಕ್ರಟ್ಸ್ ಮಂಗಳೂರು ಗ್ರಾಮಾಂತರ ಜಿಲ್ಲಾ ಆರ್ಗನೈಸಿಂಗ್ ಸಮಿತಿ ಸದಸ್ಯರಾಗಿ ಆಯ್ಕೆಯಾದ ಹಮೀದ್ ಪುತ್ತೂರು ರವರಿಗೆ ಎಸ್.ಡಿ.ಪಿ.ಐ ಕುಂಬ್ರ ಬ್ಲಾಕ್ ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.


