ಕೆಟ್ಟ ವಾಸನೆ ಬೀರುವ, ಹಳಸಿದ ಚಿಕನ್ ಅನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂಬ ಆರೋಪದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿರುವ ಮಾಲ್ವೊಂದರ ದೊಡ್ಡ ಆಹಾರ ಮಳಿಗೆಯೊಂದರಲ್ಲಿ ಪರಿಶೀಲನೆ ನಡೆಸಿ, ನ್ಯೂನತೆ ಸರಿಪಡಿಸುವಂತೆ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.

ಜಿಲ್ಲೆಯ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿಯೋಜಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಅವರಿಗೆ ಬಂದ ದೂರಿನ ಅನ್ವಯ ಅಧಿಕಾರಿಗಳು ಆ ಮಳಿಗೆಯ ಕಿಚನ್, ದಾಸ್ತಾನು ಕೊಠಡಿ, ಡೀಪ್ ಫ್ರೀಜರ್ (ಜಾಗತಿಕ ಮಟ್ಟದಲ್ಲಿ ಆಹಾರ ಸರಪಳಿ ಹೊಂದಿರುವ ಮಳಿಗೆ) ಪರಿಶೀಲನೆ ನಡೆಸಿದರು.

‘ಹಳೆಯ ಆಹಾರದ ದಾಸ್ತಾನಿನಿಂದ ಈ ದುರ್ವಾಸನೆ ಉಂಟಾಗಿರಬಹುದು ಎಂದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡುಬಂದಿದೆ. ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗುವುದು. ಹಳೆಯ ದಾಸ್ತಾನು ಖಾಲಿ ಮಾಡಿ, ಮಳಿಗೆ ಆವರಣ ಸ್ವಚ್ಛಗೊಳಿಸುವವರೆಗೆ ಮಳಿಗೆ ತೆರೆಯದಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತೊಮ್ಮೆ ಪರಿಶೀಲಿಸಿದ ಆನಂತರ ಅನು ಮತಿ ನೀಡಲಾಗುವುದು’ ಎಂದು ಡಾ. ಪ್ರವೀಣ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

