ಕಾಪು: ಪಾಂಗಳದ ವಿದ್ಯಾವರ್ಧಕ ಕನ್ನಡ ಮಾಧ್ಯಮ ಶಾಲೆಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ರಾಜೇಗೌಡ ಅವರ ವತಿಯಿಂದ ನವೀಕೃತ ಸಭಾಂಗಣ, ಸುಸಜ್ಜಿತ ಪ್ರೊಜೆಕ್ಟರ್ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮುಂದಿನ ದಿನಗಳಲ್ಲಿಯೂ ಅಗತ್ಯ ಸಹಾಯ ಹಾಗೂ ಸಹಕಾರ ನೀಡುವುದಾಗಿ ಶಾಸಕ ರಾಜೇಗೌಡ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಶಾಲೆಗಳ ಸಂಚಾಲಕ ಪಾಂಗಳ ರಾಜೇಶ್ ರಾವ್ ಮಾತನಾಡಿ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿರುವ ರಾಜೇಗೌಡ ಅವರ ಸೇವೆಯನ್ನು ಗೌರವಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕು. ಅವರ ಸಾಧನೆಯ ಹಾದಿಯಲ್ಲಿ ಶಾಲೆ ಸದಾ ಪ್ರೋತ್ಸಾಹವಾಗಿ ಜೊತೆಗಿರಲಿದೆ ಎಂದರು.

ವಿದ್ಯಾವರ್ಧಕ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ 50 ವರ್ಷಗಳ ಕಾಲ ಸತತ ಸೇವೆ ಸಲ್ಲಿಸಿದ ಹಿರಿಯರಾದ ಪಿ. ಸುಬ್ಬರಾವ್ ಅವರು ನವೀಕೃತ ಸಭಾಂಗಣವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ತಂದು ಶಾಲೆಯ ಗೌರವ ಹೆಚ್ಚಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ. ಭೋಜರಾಜ ಶೆಟ್ಟಿ, ಉಪಾಧ್ಯಕ್ಷ ಬಿ. ರಾಧಾಕೃಷ್ಣ ರಾವ್, ಆಡಳಿತ ಮಂಡಳಿ ಸದಸ್ಯರಾದ ಬಿ.ಹೆಚ್. ಗೋಪಾಲಕೃಷ್ಣ ರಾವ್, ಸುರೇಂದ್ರ ಆಚಾರ್ಯ, ಯಶೋಧ ದೇವಾಡಿಗ, ಇನ್ನೆಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಾನಂದ್ ಅಮಿನ್, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಹಾಗೂ ಹಳೆ ವಿದ್ಯಾರ್ಥಿ ಕೃಷ್ಣ ಪ್ರಸಾದ್, ಹಳೆ ವಿದ್ಯಾರ್ಥಿನಿ ವಕೀಲೆ ಕಾವ್ಯ ಅಂಚನ್, ನಿವೃತ್ತ ಮುಖ್ಯ ಶಿಕ್ಷಕ ಫ್ರಾನ್ಸಿಸ್, ಮುಖ್ಯ ಶಿಕ್ಷಕಿ ಕಲ್ಯಾಣಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಸಹನ್ ದೇವಾಡಿಗ ಹಾಗೂ ಸಚಿನ್ ಆಚಾರ್ಯ, ಇನ್ನೆಂಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಆಚಾರ್ಯ, ಮಾಧ್ಯಮ ಮಿತ್ರ ಸಂತೋಷ್ ಎಂ. ಶೆಟ್ಟಿಗಾರ್, ಕಚೇರಿ ಸಹಾಯಕ ವಿಜಯ್ ಶೇರಿಗಾರ್, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

