ಮಂಗಳೂರಿನ ಪ್ರೆಸಿಡೆನ್ಸಿ ಶಾಲೆಯ ಕಲಾ ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿರುವ ಝುಬೇರ್ ಖಾನ್ ಕುಡ್ಲ ಅವರು 2026ನೇ ಸಾಲಿನ ಪ್ರತಿಷ್ಠಿತ ‘ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಬಿ ನ್ಯೂಸ್ ಪತ್ರಿಕೆ ಹಾಗೂ ಸಿರಿಗನ್ನಡ ಫೌಂಡೇಶನ್ ಕರ್ನಾಟಕ ಇವರ ಜಂಟಿ ಆಶ್ರಯದಲ್ಲಿ, ಇವರ ಸುದೀರ್ಘ ಸಮಾಜಮುಖಿ, ಸಾಹಿತ್ಯಿಕ ಮತ್ತು ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 06/09/2026 ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ ವೇದಿಕೆಯಲ್ಲಿ ನಡೆಯಲಿರುವ ಶಿಕ್ಷಕರ ಹಬ್ಬ ಕಾರ್ಯಕ್ರಮದಲ್ಲಿ ಜರುಗಲಿದೆ.
ಬಹುಮುಖ ಪ್ರತಿಭೆಯ ಕಲಾ ಶಿಕ್ಷಕರಾದ ಝುಬೇರ್ ರವರು ಕಲಾ ಶಿಕ್ಷಕರಾಗಿ, ಚಿತ್ರಕಲಾವಿದನಾಗಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕಲಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ .ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ಮೆಚ್ಚುಗೆ ಪತ್ರ ಪಡೆದಿರುವ ಇವರು ರಾಜಾ ರವಿವರ್ಮ ಅಂತರಾಷ್ಟ್ರೀಯ ಗೋಲ್ಡ್ ಮೆಡಲ್, ಎಮ್.ಎಫ್.ಹುಸೈನ್ ಅಂತರಾಷ್ಟ್ರೀಯ ಪ್ರಶಸ್ತಿ ಹಾಗೂ ಇನ್ನೂ ಹಲವಾರು ಪ್ರಶಸ್ತಿ ಪಡೆದಿರುತ್ತಾರೆ.

