ಪಡುಬಿದ್ರಿ: ತುಳುನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಪಡುಬಿದ್ರಿ-ಪಾದೆಬೆಟ್ಟು ಪದ್ರದಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶಿಲಾನ್ಯಾಸ ನೆರವೇರಿತು.
ಸುಮಾರು ರೂ.1.50 ಕೋಟಿ ವೆಚ್ಚದಲ್ಲಿ ದೈವಸ್ಥಾನವನ್ನು ಪುನರ್ ನಿರ್ಮಾಣ ಕಾಮಗಾರಿಯ ಅಂಗವಾಗಿ ಶಿಲಾನ್ಯಾಸ, ಮುಷ್ಠಿ ಕಾಣಿಕೆ ಸಮಾರಂಭ ಹಾಗೂ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕರಾವಳಿ ಕರ್ನಾಟಕದ ಕುಟುಂಬ ಪದ್ಧತಿ ಹಾಗೂ ತುಳುನಾಡಿನ ಧಾರ್ಮಿಕ ಪರಂಪರೆ ಅನುಕರಣೀಯವಾಗಿದೆ. ಇದೇ ಹಿನ್ನೆಲೆಯಲ್ಲಿ ತುಳುನಾಡಿನ ಹಲವು ದೈವ-ದೇವಸ್ಥಾನಗಳು ಭವ್ಯವಾಗಿ ಪುನರ್ನಿರ್ಮಾಣಗೊಳ್ಳುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನವಿ ಪತ್ರ ಬಿಡುಗಡೆಗೊಳಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಧಾರ್ಮಿಕ ಕಾರ್ಯಗಳಿಗೆ ಸರ್ವರ ಸಹಕಾರ ಅಗತ್ಯ. ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಪುನರ್ನಿರ್ಮಾಣ ಕಾರ್ಯ ಸುಲಲಿತವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಶ್ರೀನಿವಾಸ ಉಪಾಧ್ಯಾಯ ಹಾಗೂ ವಿಷ್ಣುಮೂರ್ತಿ ಆಚಾರ್ಯ ಅವರ ನೇತೃತ್ವದಲ್ಲಿ ಗ್ರಾಮಸ್ಥರ ಉಪಸ್ಥಿತಿಯಲ್ಲಿ ದೈವಸ್ಥಾನದ ಪುನರ್ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನವೀನ್ಚಂದ್ರ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಆಸ್ಟೆನ್ಸ್ ಎಸ್ಇಝಡ್ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಪಡುಬಿದ್ರಿ ಏಳುಮಾಗಣೆ ಅಧ್ಯಕ್ಷ ಸದಾನಂದ ಬೊಗ್ಗರಿ ಲಚ್ಚಿಲ್ ಶುಭ ಹಾರೈಸಿದರು.
ಸಮಿತಿಯ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಪಲ್ಲವಿ, ಜೀರ್ಣೋದ್ಧಾರ ಸಮಿತಿಯ ಮುಂಬೈ ವಿಭಾಗದ ಅಧ್ಯಕ್ಷ ನಾರಾಯಣ ಸಿ. ಶೆಟ್ಟಿ ಪದ್ರ, ಸೀತಾರಾಮ ಶೆಟ್ಟಿ, ಸುಂದರ ಶೆಟ್ಟಿ, ಉದಯ ಕೆ. ಶೆಟ್ಟಿ, ದಿನೇಶ್ ಶೆಟ್ಟಿ, ದುಬೈ ಸಮಿತಿಯ ಶೈಲೇಶ್ ಎನ್. ಶೆಟ್ಟಿ ಹಾಗೂ ಮನೋಜ್ ಎನ್. ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯ ಎಸ್. ಶೆಟ್ಟಿ ಪದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು.
ಸಮಿತಿಯ ಪ್ರಧಾನ ಕೋಶಾಧಿಕಾರಿ ರವಿ ಶೆಟ್ಟಿ ಅಪ್ಪಿ ಮೇಲ್ಪನೆ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಂತೋಷ್ ನಂಬಿಯಾರ್ ನಿರ್ವಹಿಸಿದರು.


