ಕರಾವಳಿಯಾದ್ಯಂತ ಕಾಂಡ್ಲಾವನ ಬೆಳೆಸುವ ಚಿಂತನೆ: ಸಚಿವ ಅರವಿಂದ್ ಲಿಂಬಾವಳಿ
ಕುಂದಾಪುರ: ಸೈಕ್ಲಾನ್, ಸುನಾಮಿಯಂತಹ ಪ್ರಾಕೃತಿಕ ವಿಕೋಪ ತಡೆ, ಮೀನುಗಳ ಸಂತಾನೋತ್ಪತ್ತಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಕಾಂಡ್ಲಾವನ ಬೆಳೆಸುವುದು ಹಾಗೂ ಸಂರಕ್ಷಣೆಯ ಬಗ್ಗೆ ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.ಅವರು ಕುಂದಾಪುರದ ಪಂಚಗಂಗಾವಳಿ ಹಿನ್ನಿರು ಭಾಗದಲ್ಲಿರುವ ಕಾಂಡ್ಲಾವನ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.ಕರಾವಳಿಯಾದ್ಯಂತ ಕಾಂಡ್ಲಾವನ ಬೆಳೆಸಲು ಅರಣ್ಯ ಇಲಾಖೆಯಿಂದ ಚಿಂತನೆ ನಡೆಸಲಾಗಿದೆ. ಕುಂದಾಪುರದ ಪ್ರಸಿದ್ಧ ಕಾಣೆ ಮೀನು ಈ ಪ್ರದೇಶದಲ್ಲಿಯೇ ಸಂತಾನೋತ್ಪತ್ತಿ ಮಾಡುತ್ತದೆ. ವೀಕ್ಷಣೆ ಸಂದರ್ಭದಲ್ಲಿ ಸೂಚಿಸಿದ್ದು ಇಕೋ ಟೂರಿಸಂಗೆ ಪ್ರಶಸ್ತ ಸ್ಥಳವಾಗಿದೆ. ಸಂಪೂರ್ಣ ಕರಾವಳಿಯ ಹಿನ್ನೀರಿನಲ್ಲಿ ಕಾಂಡ್ಲಾ ಬೆಳೆಸಲು ಸೂಚಿಸಲಾಗಿದೆ.

ಬಂಡಿಪುರ ಸೆರಿದಂತೆ ಬೇರೆಬೇರೆ ಪ್ರದೇಶಗಳಲ್ಲಿ ಪ್ರವಾಸ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಆದರೆ ದಟ್ಟಾರಣ್ಯ ಪ್ರದೇಶ ಪ್ರವಾಸಕ್ಕೆ ಅನುಮತಿ ಇಲ್ಲ. ಇಂದಿನ ಟೆಕ್ನಾಲಜಿ ಬಳಸಿಕೊಂಡು ವಿಡಿಯೋಗ್ರಫಿ ನಡೆಸಿ ಪ್ರವಾಸೋಧ್ಯಮ ಬಲಪಡಿಸಲು ಕ್ರಮಕೈಗೊಳ್ಳಲಾಗುತ್ತದೆ. ಟೂರಿಸಂ ಹೆಚ್ಚಿದಾಗ ಆದಾಯ ಬರಲಿದ್ದು ಅದೇ ಆದಾಯದಲ್ಲಿ ಕಾಂಡ್ಲಾವನ ಬೆಳೆಸಲಾಗುತ್ತದೆ. ಇನ್ನು ಕಡಲಾಮೆ ಸಂರಕ್ಷಣಾ ಕೇಂದ್ರ ತೆರೆಯುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಎರಡು ಕ್ಷೇತ್ರದ ಶಾಸಕರ ಜೊತೆ ಚರ್ಚಿಸುತ್ತೇನೆ ಎಂದರು.ಇದಕ್ಕೂ ಮೊದಲು ಕಾಂಡ್ಲಾವನ ಪರಿಚಯದ ಕಿರುಹೊತ್ತಿಗೆಯನ್ನು ಸಚಿವರು ಬಿಡುಗಡೆಗೊಳಿಸಿದರು. ಬೋಟ್ ಮೂಲಕ ಕಾಂಡ್ಲಾವನವನ್ನ ಸಚಿವ ಲಿಂಬಾವಳಿಯವರು ಶಾಸಕರು ಮತ್ತು ಅಧಿಕಾರಿಗಳ ಜೊತೆ ವೀಕ್ಷಿಸಿದರು.

ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಿಲ್ಲೋ ಟಾಗೋ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೇತಳ್ಕರ್, ಕುಂದಾಪುರ ಉಪವಲಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್, ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಪುರಸಭಾ ಅಧ್ಯಕ್ಷೆ ವಿಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಮುಖಂಡರಾದ ವಿಜಯ ಎಸ್. ಪೂಜಾರಿ, ಸುರೇಶ್ ಬೀಜಾಡಿ, ಸತೀಶ್ ಪೂಜಾರಿ ವಕ್ವಾಡಿ, ಮೋಹನದಾಸ್ ಶೆಣೈ, ಸಂತೋಷ್ ಶೆಟ್ಟಿ, ಶ್ವೇತಾ, ದಿವಾಕರ ಕಡ್ಗಿಮನೆ, ಸುಧೀರ್ ಕೆ.ಎಸ್., ಸುರೇಂದ್ರ ಕಾಂಚನ್, ಅವಿನಾಶ್ ಉಳ್ತೂರು ಮೊದಲಾದರು ಇದ್ದರು.


















