ಕಾಪು : ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಜೇಸಿಐ ಕಾಪು ಘಟಕದ ನೇತೃತ್ವದಲ್ಲಿ ವನಮಹೋತ್ಸವ ದಿನವನ್ನು ಆಚರಿಸಲಾಯಿತು.
ಜೇಸಿ ಅರುಣ್ ಶೆಟ್ಟಿ ಪಾದೂರು, ಶಿಲ್ಪಾ ಜಿ.ಸುವರ್ಣ ನೀಡಿರುವ 108 ಗಿಡಗಳು ಮತ್ತು ಅರಣ್ಯ ಪಾಲಕರಾದ ಕೇಶವ ಪೂಜಾರಿ ನೀಡಿರುವ 20 ಗಿಡಗಳು, ಒಟ್ಟು 128 ಗೀಡಗಳನ್ನು ಶಾಲಾ ಮಕ್ಕಳಿಗೆ ಹಂಚಿ ಶಾಲಾ ವಠಾರದಲ್ಲಿ ಹಲವಾರು ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ಉಡುಪಿ ಹಿರಿಯಡ್ಕದ ಅರಣ್ಯ ಪಾಲಕರಾದ ಕೇಶವ ಪೂಜಾರಿ ಅರಣ್ಯ ಸಂರಕ್ಷಣೆ, ಭೂ ಸಂರಕ್ಷಣೆ, ಕಡಲ್ಕೊರೆತ ಇವುಗಳ ಸವಿವರವಾದ ಮಾಹಿತಿಯನ್ನು ನೀಡಿದರು, ಮಾನವನ ಸ್ವಾರ್ಥಕ್ಕಾಗಿ ಪ್ರಕೃತಿ ನಾಶವಾಗುತ್ತಿದೆ,
ಮುಂದೊಂದು ದಿನ ನೀರಿಲ್ಲದೆ ಭೂಮಿ ಬರಡಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಜೀವ ಸಂಕುಲಗಳು ಅದೃಶ್ಯವಾಗಬಹುದು, ಹಾಗಾಗಿ ವಿದ್ಯಾರ್ಥಿಗಳು ವನಮಹೋತ್ಸವವನ್ನು ಆಚರಿಸುವ ಮೂಲಕ ಪ್ರಕೃತಿ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿ, ವನಮಹೋತ್ಸವ ಆಚರಣೆಯ ಸದುದ್ದೇಶವನ್ನು ತಿಳಿಸಿದರು.
ಜೇಸಿಐ ಕಾಪು ಘಟಕದ ಅಧ್ಯಕ್ಷ ಜೆಎಫ್ಎಮ್ ವಿಕ್ಕಿ ಪೂಜಾರಿ ಮಾತನಾಡಿ “ಪರಿಸರಂ ಏವ ಹತೋ ಹಂತಿ” ಅಂದರೆ ಪರಿಸರವನ್ನು ನಾವು ನಾಶ ಮಾಡಿದರೆ, ಪರಿಸರ ನಮ್ಮನ್ನು ನಾಶ ಮಾಡುತ್ತದೆ, ಆಧುನಿಕತೆಯ ಭರದೊಂದಿಗೆ ಅಭಿವೃದ್ಧಿಯ ನೆಪದಲ್ಲಿ, ನಮ್ಮ ನಾಶಕ್ಕೆ ನಾವೇ ಕಾರಣವಾಗುತ್ತಿದ್ದೇವೆ.
2024ರಲ್ಲಿ ನಡೆದ ಕೇರಳದ ವಯನಾಡ್ ದುರಂತ, ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ರಸ್ತೆ ಟನಲ್ ನಿರ್ಮಾಣದಿಂದ ಆದ ವಯನಾಡ್ ದುರಂತ ಇವೆಲ್ಲವೂ ಮನುಷ್ಯ ಮಾಡಿದ ತಪ್ಪು, ಇದನ್ನು ಪ್ರಕೃತಿ ಮತ್ತೆ ಮತ್ತೆ ನೆನಪಿಸುತ್ತಿದೆ.
ಹಾಗಾಗಿ ಪರಿಸರಕ್ಕೆ ಕೊಡುಗೆಯನ್ನು ನೀಡೋಣ ಹೊರತು ಪರಿಸರವನ್ನು ನಾಶ ಮಾಡುವುದು ಬೇಡ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರಾಗಿ ಕಾಪು ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ ಕೆ. ಪ್ರಶಾಂತ್ ಶೆಟ್ಟಿ, ಜೇಸಿಐ ವಲಯ 15ರ ವಲಯಾಧಿಕಾರಿ ಜೇಸಿ ಅನಿತಾ ಹೆಗ್ಡೆ, ಶಾಲಾ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಪ್ರಾಂಶುಪಾಲರಾದ ಜೇಸಿ ನಿಲಾನಂದ್ ನಾಯ್ಕ್, ಶಿಕ್ಷಣ ಸಂಯೋಜಕ ಜೇಸಿ ಶಿವಣ್ಣ ಬಾಯರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗ್ಯಾಬ್ರಿಯಲ್ ಮಸ್ಕರೇನ್ಹಸ್, ಕನ್ನಡ ಮಾಧ್ಯಮದ ಮುಖ್ಯಸ್ಥೆ ಕೃಪಾ ಅಮ್ಮಣ್ಣ ಮತ್ತು ಅಧ್ಯಾಪಕ ವೃಂದ ಹಾಗೂ ಸ್ಕೌಟ್ – ಗೈಡ್ಸ್, ಬುಲ್ ಬುಲ್,ಸೇವಾದಳ, ಎನ್.ಸಿ.ಸಿ, ಎನ್.ಎಸ್.ಎಸ್ ವಿಭಾಗಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಧ್ವನಿತ ವನಮಹೋತ್ಸವದ ಮಹತ್ವವನ್ನು ವಿವರಿಸಿದರು, ಶ್ರೀರಕ್ಷಾ ದೇವಾಡಿಗ ನಿರೂಪಿಸಿ, ಅನುಕ್ಷಾ ಸ್ವಾಗತಗೈದು, ಅಶ್ವಿನಿ ಧನ್ಯವಾದಗೈದರು.


