ನಗರದ ಕೊಟ್ಟಾರ ಮಾಲೆಮಾರ್ನಲ್ಲಿ ರಸ್ತೆ ದಾಟಲು ಕಾಯುತ್ತಿದ್ದ ಶ್ವಾನವನ್ನು ಬಾಲಕನೊಬ್ಬ ರಸ್ತೆ ದಾಟಿಸಿ, ಶ್ವಾನ ಪ್ರೀತಿಯನ್ನು ವ್ಯಕ್ತಪಡಿಸಿದ ಘಟನೆ ನಡೆದಿದೆ. ದೃಶ್ಯವನ್ನು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಅಪುಲ್ ಆಳ್ವ ಸೆರೆ ಹಿಡಿದಿದ್ದು. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗ್ತಿದೆ.
ಕೊಟ್ಟಾರ-ಮಾಲೆಮಾರ್ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ನಾಯಿಯೊಂದು ರಸ್ತೆ ದಾಟಲು ಕಾಯುತ್ತಿತ್ತು. ನಿರಂತರವಾಗಿ ಬರುತ್ತಿದ್ದ ಮಳೆ ಒಂದೆಡೆಯಾದರೆ, ಇನ್ನೊಂದೆಡೆ ಸಾಲು ಸಾಲಾಗಿ ಬರುತ್ತಿದ್ದ ವಾಹನಗಳಿಂದ ರಸ್ತೆ ದಾಟಲು ಈ ನಾಯಿಗೆ ಸಾಧ್ಯವಾಗಿರಲಿಲ್ಲ. ಈ ವೇಳೆ ಇದನ್ನು ಅದೇ ರಸ್ತೆಯಲ್ಲಿ ಸೈಕಲ್ನಲ್ಲಿ ತರಕಾರಿ ಮಾರಿಕೊಂಡು ಹೋಗುತ್ತಿದ್ದ ಬಾಲಕನೊಬ್ಬ ಗಮನಿಸಿದ್ದಾನೆ. ಕೂಡಲೇ ಸೈಕಲ್ನಲ್ಲಿ ಮರಳಿ ಬಂದು ಸೈಕಲ್ನಿಂದ ಇಳಿದು ನಾಯಿಯ ಎರಡು ಕಾಲುಗಳನ್ನು ಹಿಡಿದು ಸೈಕಲ್ ಜತೆಗೆ ರಸ್ತೆ ದಾಟಿಸಿ ಬಿಟ್ಟಿದ್ದಾನೆ. ನಾಯಿ ತನ್ನ ಪಾಡಿಗೆ ಹೋದರೆ, ಬಾಲಕ ಸೈಕಲ್ ಏರಿ ತರಕಾರಿ ಮಾರಾಟಕ್ಕೆ ಹೊರಟು ಹೋಗಿದ್ದಾನೆ.
ಈ ಮಾನವೀಯ ದೃಶ್ಯವನ್ನು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಅಪುಲ್ ಆಳ್ವ ಸೆರೆ ಹಿಡಿದಿದ್ದು. ಬಾಲಕನ ಈ ಮಾದರಿ ಕಾರ್ಯ ಮತ್ತು ಪ್ರಾಣಿ ಪ್ರೀತಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು. ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗ್ತಿದೆ.

