ಬೈಕಂಪಾಡಿಯಲ್ಲಿ ರೈಲು ಢಿಕ್ಕಿಯಾಗಿ ಬೀಡಾಡಿ ಎಮ್ಮೆಗಳ ಸಾವು : ಜಾನುವಾರುಗಳ ವಿಲೇವಾರಿಗೆ ಮುಂದಾಗದ ಇಲಾಖೆ

ಬೈಕಂಪಾಡಿಯ ಅಂಗರ ಗುಂಡಿಯಲ್ಲಿ ಗೂಡ್ಸ್ ರೈಲು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದ ಜಾನುವಾರಗಳ ವಿಲೇವಾರಿ ಕಾರ್ಯಾಚರಣೆ ಸ್ಥಳೀಯ ಯುವಕರು ಮತ್ತು ಡಿವೈಎಫ್ಐ ಮುಖಂಡರ ಸಹಕಾರದಲ್ಲಿ ನಡೆಯಿತು.
ರೈಲು ಹಳಿಯ ಮೇಲೆ ಮೇಯುತ್ತಿದ್ದ 20ಕ್ಕೂ ಅಧಿಕ ಎಮ್ಮೆಗಳು ಗೂಡ್ಸ್ ರೈಲು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದವು. ಬೆಳಿಗ್ಗೆ ಅಪಘಾತ ಸಂಭವಿಸಿದ್ದು ಶವಗಳು ಚೆಲ್ಲಾಪಿಲ್ಲಿಯಾಗಿದ್ದರೂ ಸಂಜೆ ತನಕ ಅವುಗಳ ವಿಲೇವಾರಿ ಮಾಡಲು ಇಲಾಖೆ ಮುಂದಾಗಿರಲಿಲ್ಲ. ಈ ಸಂದರ್ಭ ಸ್ಥಳಕ್ಕೆ ಬಂದ ಡಿವೈಎಫ್ಐ ಮುಖಂಡರು ಹಾಗೂ ಸಾರ್ವಜನಿಕರು ರೈಲ್ವೆ ಅಧಿಕಾರಿಗಳ ಅಗಮನಕ್ಕೆ ಪಟ್ಟು ಹಿಡಿದರು. ಇದೇ ವೇಳೆ ಸ್ಥಳಕ್ಕೆ ಬಂದ ರೈಲ್ವೇ ಇನ್ಸ್ಪೆಕ್ಟರ್ಗೆ ಸ್ಥಳೀಯರು ಘೇರಾವ್ ಹಾಕಿದರು.
ಆನಂತರ ಪಾಲಕ್ಕಾಡ್ನ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಇದೇ ವೇಳೆ ನೀರಿಗೆ ಬಿದ್ದ ಜಾನುವಾರಗಳ ಮೃತದೇಹವನ್ನು ಮೇಲಕೆತ್ತುವ ಕಾರ್ಯ ನಡೆಯಿತು. ಸ್ಥಳೀಯ ಯುವಕರು ಮತ್ತು ಡಿವೈಎಫ್ಐ ಮುಖಂಡರು ಮಧ್ಯರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಎಮ್ಮೆ, ಕರು ಮತ್ತು ಕೋಣಗಳನ್ನು ಮೇಲಕ್ಕೆತ್ತಿ ವಿಲೇವಾರಿ ಮಾಡಿಸುವಲ್ಲಿ ಸಹಕರಿಸಿದರು.