ದೂರುಗಳಿಗೆ ಸಿ-ವಿಜಲ್ ಉಪಯುಕ್ತ

ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತ ದೂರುಗಳನ್ನು ದಾಖಲಿಸಲು ಕೇಂದ್ರ ಚುನಾವಣಾ ಆಯೋಗ (ಇಸಿಐ) ಅಭಿವೃದ್ಧಿ ಪಡಿಸಿದ ಸಿ-ವಿಜಲ್ ಆಪ್ ಅತ್ಯಂತ ಉಪಯುಕ್ತ ಎಂದು ಜಿಲ್ಲಾ ಐಟಿ ನೋಡಲ್ ಅಧಿಕಾರಿ ಡಾ. ಬಸವರಾಜ್ ತಲ್ವಾರ್ ಹೇಳಿದರು.
ಅವರು ಏ.7ರ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಿ-ವಿಜಲ್ ಆಪ್ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಗಾರದಲ್ಲಿ ಮಾತನಾಡಿದರು.
ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ(ಎಂಸಿಸಿ)ಯ ಉಲ್ಲಂಘನೆಯ ವಿಚಾರದಲ್ಲಿ ಸಾರ್ವಜನಿಕರು ಸಿ-ವಿಜಲ್ ಆಪ್ ಮೂಲಕ ದೂರುಗಳನ್ನು ನೇರವಾಗಿ ಸಲ್ಲಿಸಬಹುದು, ಹಲ್ಲೆ, ಅಕ್ರಮ ಹಣ, ಸುಳ್ಳು ಸುದ್ದಿ ಹರಡುವುದು, ವಸ್ತು, ಹಣದ ವಿತರಣೆ, ಆಸ್ತಿಗಳಿಗೆ ಹಾನಿ, ಮತೀಯ ಸಾಮರಸ್ಯ ಕದಡುವ ಭಾಷಣ, ಬರಹಗಳ ಕುರಿತು, ವಸ್ತುಗಳ ಉಚಿತ ಹಂಚುವುದು, ಬಂದೂಕುಗಳ ಪ್ರದರ್ಶನ, ಮದ್ಯದ ಆಮಿಷ ಸೇರಿದಂತೆ ಹಲವಾರು ವಿಚಾರಗಳ ಮೇಲೆ ಸಿ-ವಿಜಲ್ ಆಪ್ನಲ್ಲಿಯೇ ಫೆÇೀಟೋ, ವಿಡಿಯೋ ಹಾಗೂ ಆಡಿಯೋಗಳ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರು ಸಲ್ಲಿಕೆಯಾದ 100 ನಿಮಿಷದಲ್ಲಿ ದೂರಿನ ಕುರಿತು ಕ್ರಮ ಜರುಗಿಸುವ ಕೆಲಸ ನಡೆಯುತ್ತದೆ ಎಂದು ತಿಳಿಸಿದರು.

ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಸಮಯದಲ್ಲಿ ಇದೇ ಆಪ್ನಲ್ಲಿ ವಿಡಿಯೋ(20ಎಂಬಿ), ಫೆÇೀಟೋ ಹಾಗೂ ಆಡಿಯೋಗಳನ್ನು ಅಪ್ಲೋಡ್ ಮಾಡಿಕೊಂಡು ಇದಕ್ಕೆ ಸಂಬಂಧಿಸಿದ ಪುಟ್ಟ ವಿವರಣೆ ನೀಡಬೇಕು. ದೂರು ಸಲ್ಲಿಸುವಾಗ ಹೆಸರು ಇತರ ಮಾಹಿತಿ ನೀಡಿದರೆ ಅವರಿಗೆ ದೂರು ಸಂಖ್ಯೆಯ ಮೂಲಕ ದೂರಿನ ಕ್ರಮದ ಕುರಿತು ಮಾಹಿತಿ ಸಿಗುತ್ತದೆ. ಅನಾಮಧೇಯವಾಗಿ ದೂರು ಸಲ್ಲಿಕೆ ಮಾಡಿದರೆ ಅವರಿಗೆ ಕ್ರಮದ ಮಾಹಿತಿ ದೊರೆಯುವುದಿಲ್ಲ, ಆದರೆ ಈ ಕುರಿತು ಕ್ರಮ ಜರುಗಿಸಲಾಗುತ್ತದೆ ಎಂದರು.

ಇದೂವರೆಗೆ ಈ ಆಪ್ ಮೂಲಕ ಜಿಲ್ಲೆಯಲ್ಲಿ ಬಂದ 54 ದೂರುಗಳಲ್ಲಿ 38 ದೂರುಗಳಿಗೆ ಕ್ರಮ ಜರುಗಿಸಲಾಗಿದೆ. ಇದರಲ್ಲಿ ಉಳಿದ ದೂರುಗಳು ಪರಿಪೂರ್ಣವಾಗಿಲ್ಲ, ಆದ ಕಾರಣ ಅದನ್ನು ರಿಜೆಕ್ಟ್ ಮಾಡಲಾಗಿದೆ. ಸರಿಯಾದ ದೂರುಗಳಿಗೆ ಚುನಾಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಮೂಲಕ ಕ್ರಮಜರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 335 ತಂಡಗಳನ್ನು ರಚನೆ ಮಾಡಿಕೊಂಡು 458 ಸಿ-ವಿಜಲ್ ತನಿಖಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಿ-ವಿಜಲ್ ನಲ್ಲಿ ದೂರು ದಾಖಲಿಸಿಕೊಂಡ ಕೂಡಲೇ ಜಿಲ್ಲಾ ನಿಯಂತ್ರಣ ಕೇಂದ್ರ(ಡಿಸಿಸಿ)ಯ ಮೂಲಕ ದೂರುಗಳು ಫೀಲ್ಡ್‍ನಲ್ಲಿರುವ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗುತ್ತದೆ. ಈ ಬಳಿಕ ಅವರು ದೂರಿಗೆ ಸಂಬಂಧಿಸಿದಂತಹ ಮಾಹಿತಿ ಸಂಗ್ರಹ ಮಡಿಕೊಂಡು ಆರ್‍ಓ ಗಳಿಗೆ ಮಾಹಿತಿ ನೀಡುತ್ತಾರೆ. ಅಲ್ಲಿ ಸರಿಯಾದ ಮಾಹಿತಿಯಾದರೆ ಕ್ರಮ ಜರುಗಿಸಲು, ವಿಚಾರ ಸರಿ ಇಲ್ಲದೇ ಹೋದರೆ ತಿರಸ್ಕಾರ ಮಾಡಲು ಅಥವಾ ಪುನರ್ ಪರಿಶೀಲನೆ ಸೂಚಿಸಿ ಕ್ರಮ ಜರುಗಿಸಲು ಅವಕಾಶವಿದೆ. ಇದು ದೂರು ಸಲ್ಲಿಕೆಯಾಗಿ 100 ನಿಮಿಷಗಳ ಒಳಗಡೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಬಸವರಾಜ್ ಮಾಹಿತಿ ನೀಡಿದರು.ಐಟಿ ನೋಡಲ್ ಅಧಿಕಾರಿಯ ಜತೆಗೆ ಎನ್‍ಐಟಿಕೆ ಯ ಉದ್ಯೋಗಿಗಳಾದ ಡಾ. ಅರವಿಂದ್ ಕೋಳೂರು, ಡಾ. ರಾಘವೇಂದ್ರ ಬಿ.ಎಸ್. ಉಪಸ್ಥಿತರಿದ್ದರು

Related Posts

Leave a Reply

Your email address will not be published.