ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಉಡುಪಿಯ ಗುಂಡಿಬೈಲುನಲ್ಲಿರುವ ಶ್ರೀ ಶನೈಶ್ವರ ಕ್ಷೇತ್ರದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಶನಿಕಲ್ಪೋಕ್ತ ಪೂಜೆ ನಡೆಯಲಿದೆ. ಈ ಪ್ರಯುಕ್ತ ಮಾರ್ಚ್ 12, 2023 ರ ಭಾನುವಾರ ಸಂಜೆ, ದಾನಿಗಳಾದ ಸಂದೀಪ್ ಶೆಟ್ಟಿಯವರು ನೀಡಲಿರುವ ದೇವರ ಮೂರ್ತಿಯನ್ನು ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ದಿವ್ಯ ಮೆರವಣಿಗೆಯ ಮೂಲಕ ಗುಂಡಿಬೈಲುವಿನ ಶ್ರೀ ಶನೈಶ್ವರ ಕ್ಷೇತ್ರಕ್ಕೆ ತರಲಾಗುವುದು.
ನಂತರ ಮಾರ್ಚ್ 13, 2023 ರ ಸೋಮವಾರ ಬೆಳಿಗ್ಗೆ ಪ್ರತಿಷ್ಠಾ ಕಾರ್ಯಕ್ರಮ ಜರುಗಲಿದೆ. ಇದರೊಂದಿಗೆ ಶ್ರೀ ಕ್ಷೇತ್ರದಲ್ಲಿ ಗಣಹೋಮ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ಮತ್ತು ರಂಗಪೂಜೆ ನೆರವೇರಲಿದೆ. ಬಳಿಕ ರಾತ್ರಿ, ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ಭಗವತೀ ಕ್ಷೇತ್ರ ಮಹಾತ್ಮೆ” ಎಂಬ ಪುಣ್ಯ ಕಥಾ ಭಾಗ ಜರುಗಲಿದೆ. ಈ ಸುಸಂದರ್ಭದಲ್ಲಿ ಎಲ್ಲರಿಗೂ ಎಣ್ಣೆಯನ್ನು ದೇವರ ವಿಗ್ರಹಕ್ಕೆ ಸಮರ್ಪಿಸಲು ಅವಕಾಶವಿದೆ. ಇದರೊಂದಿಗೆ ಎಳ್ಳು ದೀಪ ಸೇವೆಯು ಇರಲಿದೆ.
