ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವಿಶ್ವ ಕಲಾ ದಿನಾಚರಣೆ ಪ್ರಯುಕ್ತ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪ್ರದಾನ ಕಾರ್ಯಕ್ರಮ ಎ. 21 ರಂದು ಜಾಲ್ಸೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ವಿಶ್ವ ಕಲಾ ದಿನದ ಪ್ರಯುಕ್ತ ತನ್ನ ಸೃಜನಾತ್ಮಕ ಕಲಾ ಪ್ರತಿಭೆಯಿಂದ ಜಗತ್ತನ್ನು ಸುಂದರಗೊಳಿಸುತ್ತಿರುವ ಅಡ್ಕಾರಿನ ಕ್ರಿಯೇಟಿವ್ ಕಲಾವಿದ ಶಶಿ ಅಡ್ಕಾರ್ರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪುರಸ್ಕಾರ ನೀಡಲಾಯಿತು.

ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ವಲಯ ಸಂಯೋಜಕ ಲೋಕೇಶ್ ಆಕ್ರಿಕಟ್ಟೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, “ನಿಜಕ್ಕೂ ಜೇಸಿಐ ಭಾರತದ ಈ ಕಾರ್ಯ ಇಂದು ಯೋಗ್ಯ ವ್ಯಕ್ತಿಗೆ ಅರ್ಹವಾಗಿಯೇ ತಲುಪಿದೆ ” ಎಂದರಲ್ಲದೆ ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ವಿಜಯ ಗ್ರಾಮಾಭಿವೃದ್ಧಿ ಜಾಲ್ಸೂರು ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಂಮನೆ ಅಭಿನಂದನಾ ಮಾತುಗಳನ್ನಾಡಿ, ” ಶಶಿ ಅಡ್ಕಾರುರವರು ತನ್ನ ಸೃಜನಾತ್ಮಕ ಕಲೆಗಳಿಂದ ಇಂದು ಕ್ರಿಯೇಟಿವ್ ಕಲಾವಿದನಾಗಿ ಗುರುತಿಸಿಕೊಂಡಿದ್ದು, ಅಶ್ವಥ ಎಲೆಯ ಮೂಲಕ ಹಲವು ಪ್ರಸಿದ್ಧ ವ್ಯಕ್ತಿಗಳ ಚಿತ್ರವನ್ನು ರೂಪಿಸಿದ್ದಾರೆ. ಅರ್ಹ ವ್ಯಕ್ತಿಗೆ ಇವತ್ತು ಸುಳ್ಯ ಪಯಸ್ವಿನಿ ಜೇಸಿಯವರು ಪ್ರಶಸ್ತಿ ನೀಡಿದ್ದು, ಕಲಾ ಕ್ಷೇತ್ರದಲ್ಲಿ ಶಶಿಯವರು ಇನ್ನಷ್ಟು ಹೆಸರು ಮಾಡಲಿ” ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ ಸದಾನಂದ ಜಾಕೆ, ನಿಕಟಪೂರ್ವ ಅಧ್ಯಕ್ಷ ಸುರೇಶ್ ಕಾಮತ್ ಜಯನಗರ, ಜಾಲ್ಸೂರು ಶಾಖೆಯ ಉಪ ವಲಯಾರಣ್ಯಾಧಿಕಾರಿ ಶ್ರೀಮತಿ ರಂಜಿತಾ ಪಿ., ಜಾಲ್ಸೂರು ಗ್ರಾಮ ಪಂಚಾಯತ್ ಸಿಬ್ಬಂದಿ ಚಿದಾನಂದ ಉಪಸ್ಥಿತರಿದ್ದರು.
ಜೇಸಿ ಪ್ರಸನ್ನ ಎಂ.ಆರ್. ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸತ್ಯಶಾಂತಿ ತ್ಯಾಗಮೂರ್ತಿ ಜೇಸಿವಾಣಿ ವಾಚಿಸಿದರು. ಪೂರ್ಣಿಮಾ ಕಾರಿಂಜ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಜೇಸಿಐ ಸುಳ್ಯ ಪಯಸ್ವಿನಿಯ ಜತೆ ಕಾರ್ಯದರ್ಶಿ
ವಿನೋದ್ ಮೂಡಗದ್ದೆ ವಂದಿಸಿದರು.
