ಪಶ್ಚಿಮ ಬಂಗಾಳದ ಫಾಲ್ತಾ ವಿಧಾನ ಸಭಾ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಎರಡು ದಿನ ಇರುವಾಗ ಅಭ್ಯರ್ಥಿ ಜಹಾಂಗೀರ್ ಖಾನ್ ಹಿಂದಡಿ ಇಟ್ಟಿರುವುದು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.

ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಅರೂಪ್ ಚಕ್ರಬೊರ್ತಿಯವರು ವಿಷಾದದಿಂದ ಈ ಸಂಗತಿಯನ್ನು ಹೊರಗಿಟ್ಟಿದ್ದಾರೆ. ಜಹಾಂಗೀರ್ ಖಾನ್ ಪಕ್ಷವನ್ನು ಸಂಪರ್ಕಿಸದೆ ತನಗೆ ತಾನೇ ಹಿಂದಕ್ಕೆ ಸರಿದಿರುವುದಾಗಿ ತಿಳಿಸಿದ್ದಾರೆ ಎಂದೂ ಅವರು ಹೇಳಿದರು.

ಮೇ 21ರಂದು ಮರು ಮತದಾನ ನಡೆಯಲಿದ್ದು, 24ನೇ ತಾರೀಕಿನಂದು ಮತ ಎಣಿಕೆ ನಡೆಯಲಿದೆ. ಮರು ಮತದಾನಕ್ಕೆ ಮೊದಲೇ ಟಿಎಂಸಿ ಅಭ್ಯರ್ಥಿ ನಾನು ಸ್ಪರ್ಧೆಯಲ್ಲಿ ಇಲ್ಲ ಎಂದಿರುವುದು ರಾಜಕೀಯದ ಏಳು ಬೀಳನ್ನು ಸೂಚಿಸುವಂತಿದೆ.

ಫಾಲ್ತಾ ವಿಧಾನ ಸಭಾ ಕ್ಷೇತ್ರದ ಶಾಂತಿ ಮುಖ್ಯ. ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ಫಾಲ್ತಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಫಾಲ್ತಾದ ಅಭಿವೃದ್ಧಿ ಮತ್ತು ಶಾಂತಿಗಾಗಿ ನಾನು ನನ್ನ ಅಭ್ಯರ್ಥಿತನದಿಂದ ಹಿಂದೆ ಸರಿಯುತ್ತಿರುವುದಾಗಿ ಜಹಾಂಗೀರ್ ಖಾನ್ ಹೇಳಿದ್ದಾರೆ. ಹಲವು ಬಾರಿ ಚಿಂತಿಸಿ ಫಾಲ್ತಾದ ಜನರ ಒಳಿತಿಗಾಗಿ ಹಿಂದೆ ಸರಿಯುವುದಾಗಿ ಅವರು ಹೇಳಿಕೆ ನೀಡಿದ್ದಾರೆ.

ಮೇ ೪ರಂದು ಚುನಾವಣೆ ನಡೆದಾಗ ಫಾಲ್ತಾ ಒಂದರಲ್ಲೇ ನಮ್ಮ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಮತಗಟ್ಟೆ ವಶಪಡಿಸಿಕೊಳ್ಳಲಾಗಿತ್ತು. ಚುನಾವಣಾ ಆಯೋಗ ಕಣ್ಣುಮುಚ್ಚಿಕೊಂಡಿತ್ತು. ಈಗ ನಮ್ಮ ಅಭ್ಯರ್ಥಿಯನ್ನು ಬೆದರಿಸಿ ಹಿಂದಕ್ಕೆ ಸರಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.

ಇನ್ನು ಮುಂದೆಯೂ ನಮ್ಮ ಕಟ್ಟಾ ಕಾರ್ಯಕರ್ತರು ಬಿಜೆಪಿಯ ಡೋಂಗಿಗಳನ್ನು ಬಂಡೆಯಂತೆ ನಿಂತು ಎದುರಿಸುವರು ಎಂದೂ ಪಕ್ಷದ ಹೇಳಿಕೆ ಹೊರಬಿದ್ದಿದೆ.

