ಕಡಬ: ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ದೇವಚಳ್ಳ ಗ್ರಾಮಾಡಳಿತಾಧಿಕಾರಿ ಕಚೇರಿಯ ಗ್ರಾಮ ಸಹಾಯಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮಂಗಲ ಗ್ರಾಮದಲ್ಲಿ ಗುರುವಾರ ನಡೆದಿದೆ.
ಎಡಮಂಗಲ ಗ್ರಾಮದ ಪುಳಿಕುಕ್ಕು ಸಮೀಪದ ದೋನಿಮನೆ ನಿವಾಸಿ ದೀಪಕ್ (38) ಆತ್ಮಹತ್ಯೆ ಮಾಡಿಕೊಂಡವರು. ಅವರು ಜಾಂಡೀಸ್ನಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಅನಾರೋಗ್ಯದ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ದೀಪಕ್ ಅವರ ಇಬ್ಬರು ಸಹೋದರರು ದೂರದ ಊರಿನಲ್ಲಿ ಉದ್ಯೋಗದಲ್ಲಿದ್ದಾರೆ. ಪತ್ನಿ ಮಲ್ಲಿಕಾ ಕೊಣಾಜೆ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗದಲ್ಲಿದ್ದು, ತನ್ನ ಮಗುವಿನೊಂದಿಗೆ ಕೊಣಾಜೆಯಲ್ಲಿರುವ ತಾಯಿಯ ಮನೆಯಲ್ಲಿ ವಾಸವಾಗಿದ್ದರು. ವಾರಕ್ಕೊಮ್ಮೆ ಮಾತ್ರ ದೋನಿಮನೆಗೆ ಬಂದು ಹೋಗುತ್ತಿದ್ದರು. ಹೀಗಾಗಿ ದೀಪಕ್ ಮನೆಯಲ್ಲಿ ಹೆಚ್ಚಿನ ಸಮಯ ಒಂಟಿಯಾಗಿರುತ್ತಿದ್ದರು ಎನ್ನಲಾಗಿದೆ.
ಬುಧವಾರ ತಡರಾತ್ರಿ ದೀಪಕ್ ತಮ್ಮ ಆತ್ಮೀಯರಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಸುಳಿವು ನೀಡಿದ್ದರು ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಸಮೀಪದ ಮನೆಯ ವ್ಯಕ್ತಿಯೊಬ್ಬರಿಗೆ ಕೂಡ ಸಂದೇಶ ಕಳುಹಿಸಿ, ಬೆಳಿಗ್ಗೆ ಬೇಗ ಮನೆಗೆ ಬರುವಂತೆ ಹಾಗೂ ಬರುವಾಗ ಮತ್ತೊಬ್ಬರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದರು.
ಈ ಸಂದೇಶವನ್ನು ಬೆಳಿಗ್ಗೆ ನೋಡಿದ ವ್ಯಕ್ತಿ ದೀಪಕ್ ಅವರ ಮನೆಗೆ ತೆರಳಿದಾಗ ಅವರು ಮನೆಯಲ್ಲಿ ಇರಲಿಲ್ಲ. ತೋಟಕ್ಕೆ ಹೋಗಿರಬಹುದು ಎಂದು ಭಾವಿಸಿ ವಾಪಸಾಗಿದ್ದರು. ಬಳಿಕ ಮತ್ತೆ ಮನೆ ಸಮೀಪಕ್ಕೆ ತೆರಳಿದಾಗ, ಮನೆಯ ಹಿಂಭಾಗದ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ದೀಪಕ್ ಪತ್ತೆಯಾಗಿದ್ದಾರೆ.
ಮೃತರ ಸಹೋದರ ದಿವಾಕರ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


