ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10ನೇ ಮಹಾಮೇಳದಲ್ಲಿ ಗಡಿನಾಡು ಹಾಗೂ ಹೊರನಾಡು ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಒತ್ತಾಯಿಸಲಾಯಿತು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಐತಿಹಾಸಿಕ ನಿವಾಸ “ಗಿಳಿವಿಂಡು” ಸಮಗ್ರ ಅಭಿವೃದ್ಧಿಗೆ ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಜಂಟಿಯಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಪೂರ್ಣಗೊಂಡಿರುವ ಸ್ಮಾರಕ, ಗ್ರಂಥಾಲಯ, ವಸ್ತುಸಂಗ್ರಹಾಲಯ ಹಾಗೂ ಇತರ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉನ್ನತ ಮಟ್ಟದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ಇದರ ಜೊತೆಗೆ ಕೇರಳದಲ್ಲಿ ಕನ್ನಡ ಅಕಾಡೆಮಿ ಸ್ಥಾಪನೆ, ಕನ್ನಡ ಸಾಂಸ್ಕೃತಿಕ ನಿಧಿ ರಚನೆ, ಮಲಯಾಳಂ ಭಾಷಾ ಮಸೂದೆಗೆ ಕನ್ನಡಿಗರ ಹಿತದೃಷ್ಟಿಯಿಂದ ತಿದ್ದುಪಡಿ, ಕಾಸರಗೋಡಿನಲ್ಲಿ ನಡೆಯಲಿರುವ 8ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ-2026ಕ್ಕೆ ₹50 ಲಕ್ಷ ವಿಶೇಷ ಅನುದಾನ ಹಾಗೂ ಸುಮಾರು ₹6 ಕೋಟಿ ವೆಚ್ಚದ ಕೇರಳ-ಕರ್ನಾಟಕ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದಿಂದ ನೆರವು ನೀಡುವಂತೆ ಮನವಿ ಸಲ್ಲಿಸಲಾಗಿದೆ.

ಕೇರಳ-ಕರ್ನಾಟಕ ಭವನದಲ್ಲಿ ಸಾಂಸ್ಕೃತಿಕ ಸಭಾಂಗಣ, ಗ್ರಂಥಾಲಯ, ಜಾನಪದ ವಸ್ತುಸಂಗ್ರಹಾಲಯ, ಅತಿಥಿಗೃಹ, ಮಾಧ್ಯಮ ಕೇಂದ್ರ, ತರಬೇತಿ ಕೇಂದ್ರ ಹಾಗೂ ಗಡಿನಾಡಿನ ಕನ್ನಡ ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಅಧ್ಯಯನ ಕೇಂದ್ರ ಸ್ಥಾಪಿಸುವ ಯೋಜನೆಯನ್ನೂ ಮಹಾಮೇಳದಲ್ಲಿ ಪ್ರಕಟಿಸಲಾಯಿತು.


