ಸುರತ್ಕಲ್ ಠಾಣೆ ವ್ಯಾಪ್ತಿಯ ಕಾಟಿಪಳ್ಳದಲ್ಲಿ ಪಿಯುಸಿ ಮೊದಲ ವರ್ಷ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಸಂತೋಷ್ ಡಿಸೋಜ ಎಂಬವರ ಪುತ್ರಿ ಮನಿಷಾ ಡಿಸೋಜ(17) ಸಾವನ್ನಪ್ಪಿದ ವಿದ್ಯಾರ್ಥಿನಿ. ಸ್ಥಳೀಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿನಿ ನಿನ್ನೆ ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದು, ಬಳಿಕ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಈ ವೇಳೆ, ತಾಯಿ ಮನೆಯಲ್ಲೇ ಇದ್ದು, ಹೊರಗಡೆ ಕೆಲಸ ಮಾಡುತ್ತಿದ್ದರು.

ಡೆತ್ ನೋಟ್ ನಲ್ಲಿ ನಾನು ತಪ್ಪು ಮಾಡಿದ್ದೇನೆ ಅಮ್ಮಾ ನನ್ನ ತಪ್ಪನ್ನು ಮನ್ನಿಸಿ.. ಇನ್ನು ಬದುಕಲು ಸಾಧ್ಯವಿಲ್ಲ. ನನಗೆ ಹಿಂದು ಸಂಘಟನೆಯವರು ಸಹಾಯ ಮಾಡಿಲ್ಲ. ನನಗೆ ಮೋಸ ಮಾಡಿ ಅವನು ಆರಾಮ ಆಗಿದ್ದಾನೆ. ನಾನು ನಂಬಿದವರು ನನಗೆ ಕೈಕೊಟ್ಟಿದ್ದಾರೆ, ಸಂಘಟನೆಯಲ್ಲಿದ್ದೂ ನನಗೆ ಸಹಾಯ ಸಿಗಲಿಲ್ಲ. ನನ್ನ ರೀತಿ ಯಾರದ್ದೂ ಜೀವನ ಹಾಳಾಗಬಾರದು. ನನ್ನೊಂದಿಗೆ ದೈವ, ದೇವರು ಯಾರೂ ಇಲ್ಲ ಅಮ್ಮಾ ಸಾರಿ ಅಮ್ಮಾ ಎಂದು ಹೇಳಿ ತುಳುವಿನಲ್ಲಿ ಬರೆದಿದ್ದಾಳೆ.
ವಿದ್ಯಾರ್ಥಿನಿಗೆ ಸ್ಥಳೀಯ ಯುವಕನೇ ಪ್ರೀತಿಯ ನೆಪದಲ್ಲಿ ದೈಹಿಕ ಸಂಪರ್ಕ ನಡೆಸಿ ಗರ್ಭಿಣಿಯಾಗುವಂತೆ ಮಾಡಿದ್ದಾನೆ ಎನ್ನಲಾಗಿದೆ. ಕೃತ್ಯದ ಬಗ್ಗೆ ತಂದೆ ಪೊಲೀಸ್ ದೂರು ಕೊಟ್ಟಿದ್ದು, ಸುರತ್ಕಲ್ ಠಾಣೆಯಲ್ಲಿ ಪೋಕೋ ಕಾಯ್ದೆಯಡಿ ಕೇಸು ದಾಖಲಾಗಿದೆ.


