ಕಾಪು:ಕಾಪು ಠಾಣೆ ವ್ಯಾಪ್ತಿಯ ಇನ್ನಂಜೆ ಗ್ರಾಮದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರದಂದು ಕಾಪುವಿನ ಮಂಡೇಡಿಯಲ್ಲಿನಡೆದಿದೆ.
ಮೃತರನ್ನು ಇನ್ನಂಜೆ ಗ್ರಾಮ ಭಾಸ್ಕರ ಆಚಾರ್ಯ (78) ಎಂದು ಗುರುತಿಸಲಾಗಿದ್ದು, ಅವರು 20 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಬಾಳಿಗಾ ಆಸ್ಪತ್ರೆಯಿಂದ ಔಷದೋಪಚಾರ ಮಾಡುತ್ತಿದ್ದರು. ಅವರಿಗೆ ದಿನಾಲು ಪಾಂಗಳ ಪೇಟೆಗೆ ಹೋಗಿ ಬರುವ ಅಭ್ಯಾಸವಿದ್ದು ಸಂಜೆ 6 ಗಂಟೆಗೆ ಕಾಪು ಕಡೆಗೆ ಹೋಗಿ ಬರುವುದಾಗಿ ತಿಳಿಸಿದ್ದು,ರಾತ್ರಿಯಾದರೂ ಮನೆಗೆ ವಾಪಾಸ್ಸು ಬಾರದೆ ಇದ್ದುದರಿಂದ, ಎಲ್ಲರೂ ಸೇರಿ ಕಾಪು ,ಪಾಂಗಾಳ ಉಡುಪಿ ಕಡೆಗಳಲ್ಲಿ ವಿಚಾರಿಸಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.
ಮೃತರು ತೆಗೆದುಕೊಂಡು ಹೋಗಿದ್ದ ಕೊಡೆ ಹಾಗೂ ಚಪ್ಪಲಿಗಳು ಹಾಡಿಯಲ್ಲಿ ಸಿಕ್ಕಿದ್ದು ಆ ಪರಿಸರದಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ.ಮನೆಯಿಂದ 2 ಕಿಮೀ ದೂರದ ಪರಿಚಯದ ಸಂಪಶೆಟ್ಟಿರವರು ನಾಪತ್ತೆಯಾಗಿದ್ದ ಭಾಸ್ಕರ ಆಚಾರ್ಯ ಮಗಳು ದೀಪಾರವರಿಗೆ ಮೊಬೈಲ್ ಕರೆ ಮಾಡಿ ತಂದೆಯವರ ಮೃತ ದೇಹವು ತಮ್ಮ ಬಾವಿಯಲ್ಲಿ ತೇಲಾಡುತ್ತಿದ್ದ ಬಗ್ಗೆ ತಿಳಿಸಿದ್ದು, ಅದರಂತೆ ಸ್ಥಳಕ್ಕೆ ಹೋಗಿ ನೋಡಲಾಗಿ ಬಾವಿಯಲ್ಲಿ ಭಾಸ್ಕರ ಆಚಾರ್ಯ ರವರ ಮೃತದೇಹವು ತೇಲಾಡುತ್ತಿರುವುದು ಕಂಡು ಬಂದಿದೆ.
ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ,ಚಾಲಕ ನಾಗರಾಜ್ ಹಾಗೂ ಪೊಲೀಸರ ನೇತೃತ್ವದಲ್ಲಿ ಮೃತ ದೇಹವನ್ನು ಬಾವಿಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.
ಕಾಪುವಿನಿಂದ ವಾಪಾಸ್ಸು ಮನೆಗೆ ಬರುವಾಗ ಕತ್ತಲೆಯಾಗಿದ್ದು, ದಾರಿ ಸರಿಯಾಗಿ ಕಾಣದೆ ಬಾವಿಗೆ ಬಿದ್ದು ಮೃತಪಟ್ಟಿರ ಬಹುದು ಎಂಬ ಮಗಳು ಶಕುಂತಳ ಹೇಳಿಕೆಯ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


