ಕಟಪಾಡಿ: ಇಲ್ಲಿನ ಎಸ್ವಿಎಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಲಾಗಿದ್ದ ‘ರಾಧಾ ಕೃಷ್ಣ ಲೀಲೋತ್ಸವ’ ಕಾರ್ಯಕ್ರಮವು ಹಬ್ಬದ ಸಂಭ್ರಮ ಹಾಗೂ ವಿಜೃಂಭಣೆಯೊಂದಿಗೆ ನೆರವೇರಿತು.
ಶಾಲಾ ಆಡಳಿತ ಮಂಡಳಿಯು ಎಲ್ಕೆಜಿಯಿಂದ 6ನೇ ತರಗತಿವರೆಗಿನ ನೂರಾರು ವಿದ್ಯಾರ್ಥಿಗಳಿಗೆ ಶ್ರೀಕೃಷ್ಣ ಹಾಗೂ ರಾಧೆಯ ವೇಷ ಧರಿಸಲು ಅವಕಾಶ ಕಲ್ಪಿಸಿತ್ತು. ಶಾಲಾ ಆವರಣದಲ್ಲಿ ನೂರಾರು ಪುಟಾಣಿಗಳು ಶ್ರೀಕೃಷ್ಣ ಮತ್ತು ರಾಧೆಯರ ವೇಷದಲ್ಲಿ ಮಿಂಚಿ, ತಮ್ಮ ಮುದ್ದಾದ ಬಾಲಲೀಲೆಗಳ ಮೂಲಕ ಹಬ್ಬದ ವಾತಾವರಣವನ್ನು ಸೃಷ್ಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲಾ ಸಂಚಾಲಕರಾದ ಸತ್ಯೇಂದ್ರ ಪೈ, “ವಿದ್ಯಾರ್ಥಿಗಳ ಬಾಲ್ಯದ ಜೀವನವೇ ಒಂದು ಸುಂದರ ಲೀಲೋತ್ಸವ. ನೂರಾರು ಪುಟ್ಟ ಕೃಷ್ಣಂದಿರು ತಮ್ಮ ಮುದ್ದಾದ ಲೀಲೆಗಳ ಮೂಲಕ ನಮಗೆ, ಹೆತ್ತವರಿಗೆ ಹಾಗೂ ಇಡೀ ಕಟಪಾಡಿ ಊರಿಗೆ ಹಬ್ಬದ ಸಂಭ್ರಮವನ್ನು ತಂದುಕೊಟ್ಟಿದ್ದಾರೆ. ಮಕ್ಕಳಿಗೆ ಸೂಕ್ತ ಅವಕಾಶಗಳನ್ನು ಒದಗಿಸಿದಾಗ ಮಾತ್ರ ಅವರಲ್ಲಿನ ಆಕಾಂಕ್ಷೆಗಳು ಬೆಳೆಯುವುದರೊಂದಿಗೆ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಶಿಕ್ಷಕರು ಮತ್ತು ಪೋಷಕರ ಶ್ರಮ ಹಾಗೂ ಸಹಕಾರದಿಂದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ,” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾ ಡಿಸೋಜ, ಆಡಳಿತ ಮಂಡಳಿಯ ಸದಸ್ಯರಾದ ಬಿ.ಸಿ. ಪೈ, ಗಣೇಶ್ ಕಿಣಿ ಹಾಗೂ ಎಸ್ವಿಎಸ್ನ ಎಇಒ ಸುಧಾಕರ್ ಬ್ರಹ್ಮಾವರ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪೋಷಕರು ಹಾಗೂ ಊರಿನ ಪ್ರಮುಖರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ, ಪುಟಾಣಿಗಳ ಮನಮೋಹಕ ಬಾಲಲೀಲೆಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

