ಹಕ್ಕು ಪತ್ರಕ್ಕಾಗಿ ಹಣವನ್ನು ಕಳೆದುಕೊಳ್ಳಬೇಡಿ : ಶಾಸಕ ಉಮಾನಾಥ್ ಕೋಟ್ಯಾನ್
ನಾವು ಹಕ್ಕುಪತ್ರ ನೀಡುತ್ತೇವೆ ಎಂದು ಮೀಟಿಂಗ್ ಗೆ ಕರೆದು ನಿಮ್ಮಿಂದ ಹಣವನ್ನು ಪಡೆದು ಮೋಸ ಮಾಡುವವರಿದ್ದಾರೆ ಆದ್ದರಿಂದ ಮೋಸದ ಮಾತುಗಳಿಗೆ ಬಲಿಯಾಗಿ ಹಣವನ್ನು ಕಳೆದುಕೊಳ್ಳದಿರಿ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಜನರನ್ನು ಎಚ್ಚರಿಸಿದ್ದಾರೆ.
ಅವರು ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ 94ಸಿ 57, 94ಸಿಸಿ 17ಮಂಜೂರಾತಿ ಆದೇಶ ಪತ್ರ ಹಾಗೂ ಪಿಂಚಣಿ ದಿನದಂಗವಾಗಿ 31ಪಿಂಚಣಿ ಆದೇಶ ಪತ್ರವನ್ನು ತಾಲೂಕು ಆಡಳಿತ ಸೌಧದಲ್ಲಿ ವಿತರಿಸಿ ಮಾತನಾಡಿದರು.
ಕಳೆದ ಐದು ವರ್ಷ ಅವಧಿಯಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಹಕ್ಕು ಪತ್ರ ಒದಗಿಸಿ ಕೊಟ್ಟಿದ್ದೇನೆ. ಸರಕಾರದ ಸವಲತ್ತು ಕೊಡುವಲ್ಲಿ ಯಾವುದೇ ಜಾತಿ, ಧರ್ಮ, ಪಕ್ಷ ನೋಡಿಲ್ಲ. ಶಾಸಕರು, ತಹಶೀಲ್ದಾರ್ ಸಹಿತ ಕಂದಾಯ ಇಲಾಖೆ ಹೊರತು ಪಡಿಸಿ ಬೇರೆಯವರಿಗೆ ಹಕ್ಕು ಪತ್ರ ಕೊಡಿಸುವ ಅಧಿಕಾರ ಇಲ್ಲ. ಕೆಲವರು ನಾವು ಹಕ್ಕು ಪತ್ರ ಕೊಡುತ್ತೇವೆ, ನಮ್ಮಲ್ಲಿ ಮೀಟಿಂಗ್ ಗೆ ಬನ್ನಿ ಎಂದು ಹೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಆದ್ದರಿಂದ ಪ್ರಜ್ಞಾವಂತ ಜನರು ಮೋಸಕ್ಕೆ ಬಲಿಯಾಗದಿರಿ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಪ್ರದೀಪ್ ಹುರ್ಡೇಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪತಹಶಿಲ್ದಾರ್ ಬಾಲಚಂದ್ರ, ತಿಲಕ್, ಕಂದಾಯ ನಿರೀಕ್ಷಕ ಮಂಜುನಾಥ್, ಇರುವೈಲು ಪಂಚಾಯತ್ ಮಾಜಿ ಅಧ್ಯಕ್ಷ ವಲೇರಿಯನ್ ಕುಟಿನ್ಹ, ಗ್ರಾಮ ಕರಣಿಕರು ಉಪಸ್ಥಿತರಿದ್ದರು.