ಕಟಪಾಡಿ: ಕಟಪಾಡಿಯ ಎಸ್ವಿಎಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ರವಿವಾರದಂದು ಕಟಪಾಡಿ ಬಂಟರ ಸಂಘ (ರಿ.) ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, “ಬಂಟ ಸಮಾಜವು ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಅತ್ಯಂತ ಶ್ರೀಮಂತ ಪರಂಪರೆಯನ್ನು ಹೊಂದಿದೆ. ತುಳುನಾಡಿನ ಸಂಸ್ಕೃತಿಯನ್ನು ಎತ್ತಿಹಿಡಿದಿರುವ ಬಂಟ ಸಮಾಜವು ಒಗ್ಗಟ್ಟಿನ ಮೂಲಕ ತನ್ನ ಶಕ್ತಿಯನ್ನು ಮತ್ತಷ್ಟು ಪ್ರದರ್ಶಿಸಬೇಕಿದೆ. ಸಂಘಟನೆಯ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ ಎಂಬುದನ್ನು ಈಗಾಗಲೇ ಸಾಬೀತುಪಡಿಸಿರುವ ಸಮಾಜ, ಎಲ್ಲ ವರ್ಗದವರನ್ನೂ ಒಗ್ಗೂಡಿಸಿಕೊಂಡು ಧಾರ್ಮಿಕ ಕೇಂದ್ರಗಳನ್ನು ಬೆಳೆಸುವಲ್ಲಿ ಮುಂಚೂಣಿಯಲ್ಲಿದೆ” ಎಂದರು.
ಇದೇ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ವಿಜಯಕುಮಾರ್ ಶೆಟ್ಟಿ ಕುದ್ರಾಡಿ ಹಾಗೂ ಅವರ ತಂಡದ ಪದಾಧಿಕಾರಿಗಳು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಕಟಪಾಡಿ ಬಂಟರ ಸಂಘದ ಪೂರ್ವಾಧ್ಯಕ್ಷ ದಯಾನಂದ ಆರ್. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಜಯರಾಜ್ ಹೆಗ್ಡೆ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷ ಹಾಗೂ ಉದ್ಯಮಿ ರಾಜೇಂದ್ರ ವಿ. ಶೆಟ್ಟಿ, ಇನ್ನಂಜೆ ಉಂಡಾರು ಮೂಡುಮನೆಯ ಚಂದ್ರಶೇಖರ ಶೆಟ್ಟಿ, ಕಟಪಾಡಿ ಬಂಟರ ಸಂಘದ ಗೌರವಾಧ್ಯಕ್ಷ ದಯಾನಂದ ವಿ. ಶೆಟ್ಟಿ, ಸ್ಥಾಪಕಾಧ್ಯಕ್ಷ ಕುರ್ಕಾಲು ದಿನಕರ ಶೆಟ್ಟಿ, ಮಾಜಿ ಅಧ್ಯಕ್ಷ ವೈ. ರಂಜನ್ ಹೆಗ್ಡೆ, ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವೈ. ಭರತ್ ಹೆಗ್ಡೆ, ಹಿರಿಯ ವೈದ್ಯ ಡಾ. ಎ. ರವೀಂದ್ರನಾಥ ಶೆಟ್ಟಿ, ಗೌರವ ಸಲಹೆಗಾರ ಡಾ. ಉದಯಕುಮಾರ್ ಶೆಟ್ಟಿ, ಮಹಿಳಾ ಸಂಚಾಲಕಿ ಪ್ರಭಾವತಿ ವಿ. ಶೆಟ್ಟಿ ಹಾಗೂ ಕೋಶಾಧಿಕಾರಿ ದೀಕ್ಷಿತ್ ಶೆಟ್ಟಿ ಪೊಸಾರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ದಯಾನಂದ ಆರ್. ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ, ಕಾರ್ಯದರ್ಶಿ ಉಮೇಶ್ ಶೆಟ್ಟಿ ಕುರ್ಕಾಲು ವಂದಿಸಿದರು.

