ನೆಲ್ಲಿಕಾರಿನಲ್ಲಿ ಶುಕ್ರವಾರ ವೃದ್ಧೆ ಬಾವಿಗೆ ಬಿದ್ದು ತದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದ ಸಂದಭ೯ದಲ್ಲಿ ಪರಿಚಯಸ್ಥ ಆಟೋ ಚಾಲಕ ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಸತ್ಯತೆ ಭಾನುವಾರ ಬಯಲಾಗಿದೆ.
ನೆಲ್ಲಿಕಾರಿನ ಮನೆಯೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಎಪ್ಪತ್ತರ ಹರೆಯದ ಪದ್ಮಾವತಿ ಎಂಬವರ ಮನೆಗೆ ಅದೇ ಪರಿಸರದ ರಿಕ್ಷಾ ಚಾಲಕ ಸತೀಶ್ ಶೆಟ್ಟಿ ಎಂಬಾತ ಪ್ರತಿನಿತ್ಯ ಹೋಗಿಬರುತ್ತಾ ಆಕೆಯನ್ನು ಬ್ಯಾಂಕ್ ಹಾಗೂ ಅಂಗಡಿಗೆ ಕರೆದೊಯ್ಯಲು, ಎಲ್ಲಿಗಾದರೂ ಹೋಗಲಿಕ್ಕಿದ್ದರೆ ಆಟೋದಲ್ಲಿ ಕರೆದುಕೊಂಡು ಹೋಗಿ ಸಣ್ಣ ಪುಟ್ಟ ಸಹಾಯವನ್ನು ಮಾಡುತ್ತಿದ್ದ.
ಅವರಿಬ್ಬರೂ ಪರಸ್ಪರ ಆತ್ಮೀಯರಾಗಿದ್ದು ಸಂಜೆವೇಳೆಗೆ ಒಟ್ಟಿಗೆ ಕುಳಿತು ಕುಡಿಯುತ್ತಿದ್ದರು. ಮಹಿಳೆಗೆ ಆತನ ಮೇಲೆ ವಿಶ್ವಾಸವಿತ್ತು. ವೃದ್ಧೆಯ ಮನೆಯಲ್ಲಿ ಹಳೆಯದಾದ ಕೆಲವು ಬಂಗಾರಗಳು ಇರುವುದು ಆತನ ಗಮನಕ್ಕೆ ಬಂದಿದೆ.ಅದಕ್ಕಾಗಿ ಆತ ಕಾಯುತ್ತಿದ್ದ.
ಶುಕ್ರವಾರ ಅವರಿಬ್ಬರೂ ಒಟ್ಟಿಗೆ ಕುಳಿತು ಕುಡಿದಿದ್ದಾರೆ. ಆದರೆ ಮರುದಿನ ಶನಿವಾರ ಬೆಳಿಗ್ಗೆ ಪದ್ಮಾವತಿ ಅವರು ಬಾವಿಯಲ್ಲಿದ್ದರು.
ಆಕೆಯನ್ನು ಬಾವಿಗೆ ದೂಡಿಹಾಕಿ ಸತೀಶ್ ಶೆಟ್ಟಿ ಮನೆಯಲ್ಲಿದ್ದ ಬಂಗಾರಗಳನ್ನು ದೋಚಿದ್ದ. ಆಕೆ ಮೃತಪಟ್ಟಿದ್ದಾರೆಂದೇ ಭಾವಿಸಿದ್ದ.ಯಾವಾಗ ಆಕೆ ಬದುಕಿದ್ದಾರೆಂದು ಗೊತ್ತಾದಾಗ ಆತ ಪಕ್ಕದ ರೆಂಜಾಳ ಹಾಡಿಯತ್ತ ತೆರಳಿ ಅಲ್ಲಿ ವಿಷ ಪದಾರ್ಥ ಸೇರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೋಚಿದ್ದ ಬಂಗಾರ ಆತನ ರಿಕ್ಷಾದಲ್ಲಿ ಪತ್ತೆಯಾಗಿರುವುದರಿಂದ ಈ ಪ್ರಕರಣದ ಸತ್ಯಾಂಶ ಹೊರಬಿದ್ದಿದೆ.
ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
