ಹೆಜಮಾಡಿಯಲ್ಲಿ ಕ್ಯಾಂಟೀನ್ನ ಕೆಲಸಗಾರನಿಗೆ ಐವರ ತಂಡದಿಂದ ಥಳಿತ

ಬಿಲ್ ವಿಚಾರದಲ್ಲಿ ಹೆಜಮಾಡಿ ಟೋಲ್ ಬಳಿಯ ಹೈವೇ ಕ್ಯಾಂಟೀನ್ನಲ್ಲಿ ಕಾರ್ಮಿಕರೊರ್ವರಿಗೆ ಹಿಗ್ಗಾಮುಗ್ಗ ಥಳಿಸಿದ ಅಮಾನವೀಯ ಘಟನೆ ನಡೆದಿದೆ. ಥಳಿಸಿದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಕಳೆದ ಮೂರು ವರ್ಷಗಳಿಂದ ಇದೇ ಕ್ಯಾಂಟೀನ್ ನಲ್ಲಿ ದುಡಿಯುತ್ತಿದ್ದ ಎರ್ಮಾಳು ನಿವಾಸಿ ಸಂತೋಷ್ ಕುಮಾರ್ ಎಂಬವರೇ ಹಲ್ಲೆಗೊಳಗಾದವರು. ತಡರಾತ್ರಿ ಐವರ ತಂಡವೊಂದು ಬಿಯಾರ್ ಬಾಟಲಿ ಕೈಯಲ್ಲಿ ಹಿಡಿದುಕೊಂಡು ಬಂದು ಉಪಹಾರ ಸೇವಿಸಿದ ಬಳಿಕ ಬಿಲ್ ವಿಚಾರದಲ್ಲಿ ತಗಾದೆ ತೆಗೆದು ತಲವಾರು ಚಳಪಿಸುತ್ತಾ ಕ್ಯಾಂಟೀನ್ ಒಳ ಹೊಕ್ಕ ತಂಡ ಕೈಯಿಂದ ಹೊಡೆದುದಲ್ಲದೆ, ನೆಲಕ್ಕೆ ಬಿದ್ದ ಅವರಿಗೆ ಕಾಲಿನಿಂದಲೂ ಥಳಿಸಿದ್ದಾರೆ. ತಲವಾರು ಚಳಪಿಸುತ್ತಾ ತಾವು ಬಂದ ಕಾರಿನಲ್ಲಿ ಮಂಗಳೂರು ಕಡೆಗೆ ವೇಗವಾಗಿ ಹೋಗಿದ್ದಾರೆ ಎಂಬುದಾಗಿ ಹಲ್ಲೆಗೊಳಗಾದ ಸಂತೋಷ್ ಕುಮಾರ್ ತಿಳಿಸಿದ್ದಾರೆ. ಪಡುಬಿದ್ರಿ ಠಾಣೆಗೆ ಪ್ರಕರಣ ದಾಖಲಾಗಿದೆ.
