ಪುತ್ತೂರು: ಯುವಕನಿಂದ ಯುವತಿಯ ಕೊಲೆ-ಆರೋಪಿ ಪದ್ಮರಾಜ್ ಬಂಧನ
ಪುತ್ತೂರು: ಯುವಕನೊರ್ವ ಯುವತಿಯ ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆಗೈದ ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣಾ ಬಳಿ ನಡೆದಿದೆ.
ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕುದ್ದುಪದವಿನ ವಿಜಯನ್ ಎಂಬವರ ಪುತ್ರಿ ಗೌರಿ ಎಂಬಾಕೆ ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದು ತಕ್ಷಣ ಆಕೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಪುತ್ತೂರು ಬಸ್ ನಿಲ್ದಾಣದಲ್ಲಿ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೈಬೇಲು ನಿವಾಸಿ ಪದ್ಮರಾಜ್ ಮತ್ತು ಯುವತಿ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಕೊನೆಗೆ ಆಕೆ ಮಹಿಳಾ ಪೊಲೀಸ್ ಠಾಣೆಯ ಬಳಿ ಬಂದಾಗ ಬೈಕ್ನಲ್ಲಿ ಬಂದ ಪದ್ಮರಾಜ್ ಆಕೆಯ ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ. ಆರೋಪಿ ಪದ್ಮರಾಜ್ನನ್ನು ಬಂಟ್ವಾಳ ತಾಲೂಕಿನ ಮಾವಿನಕಟ್ಟೆ ಬಳಿ ಪೋಲಿಸರು ಬಂಧಿಸಿದ್ದಾರೆ.