ಮೂಡುಬಿದಿರೆ: ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಕಳೆದ ಎರಡು ವರ್ಷಗಳಿಂದ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಪುಚ್ಚ ಮೊಗರು ಗ್ರಾಮದ ಸತೀಶ್ ಪೂಜಾರಿಗೆ ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್, ಅಮನಬೆಟ್ಟು, ಪಡುಮಾರ್ನಾಡ್ ವತಿಯಿಂದ 10 ಸಾವಿರ ರೂ. ನೆರವು ನೀಡಲಾಯಿತು.
ಸಂಘದ ಆಗಸ್ಟ್ ತಿಂಗಳ ಮೊದಲ ಯೋಜನೆ ಹಾಗೂ 97ನೇ ಸೇವಾ ಯೋಜನೆಯಡಿ 10 ಸಾವಿರ ರೂ. ಮೊತ್ತದ ಚೆಕ್ ಅನ್ನು ಆ. 30ಕ್ಕೆ ಹಸ್ತಾಂತರಿಸಲಾಯಿತು.
ಸತೀಶ್ ಪೂಜಾರಿ ಚಿಕಿತ್ಸೆಗೆ ಇದುವರೆಗೆ ಸುಮಾರು 5 ಲಕ್ಷ ರೂ. ವೆಚ್ಚವಾಗಿದ್ದು, ಮುಂದಿನ ಚಿಕಿತ್ಸೆಗಾಗಿ ಇನ್ನಷ್ಟು ಹಣದ ಅವಶ್ಯಕತೆ ಇದೆ. ಈ ಹಿಂದೆ ಮುಂಬೈಯಲ್ಲಿ ವೃತ್ತಿನಿರತರಾಗಿದ್ದ ಅವರು ಆರೋಗ್ಯ ಸಮಸ್ಯೆಯಿಂದಾಗಿ ಊರಿನಲ್ಲಿದ್ದಾರೆ.
ಅವರ ಪತ್ನಿ ಮನೆಯಲ್ಲಿದ್ದು, 9ನೇ ತರಗತಿಯಲ್ಲಿ ಕಲಿಯುತ್ತಿರುವ ಒಬ್ಬ ಮಗಳು ಇದ್ದಾಳೆ. ಹೆಚ್ಚಿನ ಚಿಕಿತ್ಸೆಗಾಗಿ ಸತೀಶ್ ಪೂಜಾರಿ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸತೀಶ್ ಪೂಜಾರಿಯ ಸಂಕಷ್ಟವನ್ನು ಗಮನಿಸಿ ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ವತಿಯಿಂದ ನೆರವು ನೀಡಲಾಗಿದೆ.


