HomeFresh Newsಡಿ.ರತ್ನವರ್ಮ ಹೆಗ್ಗಡೆ ಸ್ಮರಣಾರ್ಥ ಕನ್ನಡ ಚರ್ಚಾಸ್ಪರ್ಧೆ

ಡಿ.ರತ್ನವರ್ಮ ಹೆಗ್ಗಡೆ ಸ್ಮರಣಾರ್ಥ ಕನ್ನಡ ಚರ್ಚಾಸ್ಪರ್ಧೆ

ಉಜಿರೆ: ದೂರದೃಷ್ಟಿಯೊಂದಿಗಿನ ವಿಶಾಲ ಮನಸ್ಥಿತಿ ಮಹತ್ತರ ಕಾರ್ಯಗಳಿಗೆ ಪ್ರೇರಣೆಯಾಗುತ್ತದೆ ಎಂದು ಮೂಡಬಿದಿರೆಯ ಎಕ್ಸಲೆಂಟ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ್ ಹೇಳಿದರು.

ಎಸ್.ಡಿ.ಎಂ. ಪದವಿ ಕಾಲೇಜಿನ ಸಮ್ಯಕ್‍ದರ್ಶನ ಸಭಾಂಗಣದಲ್ಲಿ ಡಿ. ರತ್ನವರ್ಮ ಹೆಗ್ಗಡೆ ಸ್ಮರಣಾರ್ಥ ಬುಧವಾರ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಸಾಧಾರಣ ಕೆಲಸವನ್ನು ದೂರದೃಷ್ಟಿಯೊಂದಿಗಿನ ವಿಶಾಲ ಮನಸ್ಥಿತಿಯಿಂದ ಸಾಧ್ಯವಾಗಿಸಬಹುದು. ಪ್ರಸ್ತುತ ಜಗತ್ತಿನ ಅವಶ್ಯಕತೆಗಳಿಗೆ ವಿಶಾಲ ಮನಸ್ಥಿತಿಯಿಂದ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬೇಕು. ಅದರಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ಧರ್ಮಸ್ಥಳದ ಹಿಂದಿನ ಧರ್ಮಾಧಿಕಾರಿ ಡಿ. ರತ್ನವರ್ಮ ಹೆಗ್ಗಡೆಯವರು ಸದಾ ದೂರದೃಷ್ಟಿಯಿಂದ ಯೋಜನೆಗಳನ್ನು ರೂಪಿಸುತ್ತಿದ್ದರು. ಅವುಗಳ ಕಾರ್ಯಸಾಧನೆಗೂ ಶ್ರಮಿಸುತ್ತಿದ್ದರು. ಅವರು ಧರ್ಮಸ್ಥಳದ ಆಧುನಿಕ ಕಾಯಕಲ್ಪಕ್ಕೆ ಶ್ರಮಿಸಿದ್ದರ ಹಿಂದೆ ದೂರದೃಷ್ಟಿ ಪ್ರೇರಕವಾಗಿತ್ತು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಮಾತನಾಡಿದರು. ಕೃತಜ್ಞತಾ ಭಾವದ ಕಾರ್ಯರೂಪದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ತಂದೆ ತಾಯಿಯರ ತ್ಯಾಗಕ್ಕೆ ಸದಾ ಕೃತಜ್ಞರಾಗಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿದರು. ಪ್ರಸ್ತುತ ಜಗತ್ತಿನಲ್ಲಿ ಸಂವಹನ ಕಲೆ ಅತೀ ಶ್ರೇಷ್ಟವಾದದ್ದು. ಇದು ವ್ಯಕ್ತಿತ್ವ ನಿರ್ಮಾಣದ ಜೊತೆ ನಾಯಕತ್ವ ಗುಣದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಯೋಜಕರಾದ ಡಾ. ನಾಗಣ್ಣ ಡಿ. ಎ. ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ಸ್ವಾಗತಿಸಿದರು. ಇನ್ನೋರ್ವ ಸಹಾಯಕ ಪ್ರಾಧ್ಯಾಪಕ ಆರ್. ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಪ್ರಣಮ್ಯ ಹಾಗೂ ತಂಡದವರು ಪ್ರಾರ್ಥಿಸಿದರು. ಕಾಲೇಜಿನ ಸಾಹಿತ್ಯ ಮತ್ತು ಸಾಂಸ್ಕøತಿಕ ಸಮಿತಿಯ ಮುಖ್ಯಸ್ಥರಾದ ಡಾ. ಸುಧೀರ್ ಕೆ. ವಿ. ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments