ಸುರತ್ಕಲ್ನಲ್ಲಿ ವಿದ್ಯುತ್ ಚಿತಾಗಾರ ಲೋಕಾರ್ಪಣೆ

ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆಯ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ಮತ್ತು ಎನ್.ಎಮ್.ಪಿ.ಟಿ., ಸಿ.ಎಸ್.ಆರ್. ನಿಧಿಯಡಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿದ್ಯುತ್ ಚಿತಾಗಾರದ ಉದ್ಘಾಟನಾ ಸಮಾರಂಭ ನಡೆಯಿತು.


ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ವಿದ್ಯುತ್ ಚಿತಾಗಾರವನ್ನು ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “”ಮಂಗಳೂರಿನಲ್ಲಿ ವಿದ್ಯುತ್ ಚಿತಾಗಾರವಿದ್ದು ಅಲ್ಲಿ ಹೆಣಗಳನ್ನು ಸುಡಲು ಕಾಯಬೇಕಾಗುತ್ತದೆ. ಹೀಗಾಗಿ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿ ಸುರತ್ಕಲ್ ನಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲಾಗಿದೆ. ಕೊರೋನಾ ಸಮಯದಲ್ಲಿ ಚಿತಾಗಾರದ ಅವಶ್ಯಕತೆ ತುಂಬಾ ಇತ್ತು. ಈ ಕಾರಣದಿಂದ ಸುಸಜ್ಜಿತ ವಿದ್ಯುತ್ ಚಿತಾಗಾರವನ್ನು ಇಲ್ಲಿ ಜನರ ಬಳಕೆಗೆ ಒದಗಿಸಲಾಗಿದೆ. ಸಾರ್ವಜನಿಕರ ಸಹಕಾರದಿಂದ ಮುಂದೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ” ಎಂದರು.

ವೇದಿಕೆಯಲ್ಲಿ ಕಾರ್ಪೊರೇಟರ್ ಗಳಾದ ಲೋಕೇಶ್ ಬೊಳ್ಳಾಜೆ, ಸರಿತಾ ಶಶಿಧರ್, ಲಕ್ಷ್ಮಿ ಶೇಖರ್ ದೇವಾಡಿಗ, ಸುಮಿತ್ರಾ ಕರಿಯ, ವೇದಾವತಿ, ನಯನಾ ಕೋಟ್ಯಾನ್, ಶ್ವೇತಾ ಪೂಜಾರಿ, ವೇದಾವತಿ, ಶೋಭಾ ರಾಜೇಶ್, ಇಂಜಿನಿಯರ್ ಕಾರ್ತಿಕ್, ಮಂಗಳೂರು ಉತ್ತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಲೀಲಾಧರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
