`ಮತ್ತಾವಿಗೆ ಮತ್ಯಾವಾಗ ಸೇತುವೆ’ ವಿಶೇಷ ವರದಿಗೆ ಪತ್ರಕರ್ತ ನರೇಂದ್ರ ಮರಸಣಿಗೆ ಅವರಿಗೆ ಪ.ಗೋ. ಪ್ರಶಸ್ತಿ

ಮಂಗಳೂರು: ನಗರದ ಪತ್ರಿಕಾಭವನದಲ್ಲಿ ನಡೆದ ಸಮಾರಂಭದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿಯನ್ನು ವಿಜಯವಾಣಿ ಹೆಬ್ರಿ ವರದಿಗಾರ ನರೇಂದ್ರ ಮರಸಣಿಗೆ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು 10,001 ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿತ್ತು. ನರೇಂದ್ರ ಅವರ ಮತ್ತಾವಿಗೆ ಮತ್ಯಾವಾಗ ಸೇತುವೆ' ವಿಶೇಷ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನರೇಂದ್ರ ಮರಸಣಿಗೆ,ಮತ್ತಾವು ತೀರಾ ಗ್ರಾಮೀಣ ಪ್ರದೇಶವಾಗಿದ್ದು, ರಸ್ತೆ, ಮೂಲಸೌಲಭ್ಯ ಮರೀಚಿಕೆಯಾದ ಊರಾಗಿದೆ. ಮಳೆಗಾಲದ ಆರು ತಿಂಗಳು ಇಲ್ಲಿಗೆ ತೆರಳುವುದಕ್ಕೆ ಹರಸಾಹಸ ಪಡಬೇಕು. ಜತೆಗೆ ಮತ್ತಾವು ನಕ್ಸಲ್ ಪೀಡಿತ ಪ್ರದೇಶ. ಇಲ್ಲಿಗೆ ಸೇತುವೆ ನಿರ್ಮಿಸುತ್ತೇವೆ ಎಂಬ ಆಡಳಿತ ವರ್ಗ ನೀಡಿದ ಭರವಸೆ ಇನ್ನೂ ಈಡೇರಿಲ್ಲ’ ಎಂದರು.

ಗ್ರಾಮೀಣ ಪತ್ರಕರ್ತರು ಸವಾಲಿನ ನಡುವೆ ಕೆಲಸ ಮಾಡುತ್ತಿದ್ದಾರೆ. ವರದಿಗಾರಿಕೆ ಮೇಲೆ ರಾಜಕೀಯ ಪರಿಣಾಮ ಬೀರುತ್ತಿರುವುದು ದುರಂತ ಎಂದರು.

ಮೆಸ್ಕಾಂ ತಾಂತ್ರಿಕ ನಿರ್ದೇಶಕ ರಮೇಶ್ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಹಿರಿಯ ಪತ್ರಕರ್ತ ಶ್ರೀಕರ ಎಲ್. ಭಂಡಾರ್ಕರ್ ಅತಿಥಿಯಾಗಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ಆರೀಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.