ಉಪ್ಪಿನಂಗಡಿ: ದ.ಕ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ- ಕುಮಾರಧಾರ ನದಿ ಪಾತ್ರಗಳ ಪ್ರದೇಶಗಳ ಪರಿಸರ ದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಉಭಯ ನದಿಗಳು ತಡರಾತ್ರಿಯಿಂದ ಉಪ್ಪಿನಂಗಡಿಯಲ್ಲಿ ಮೈದುಂಬಿ ಹರಿಯತೊಡಗಿವೆ. ಆದ್ದರಿಂದ ಇಲ್ಲಿ ಪ್ರವಾಹದ ಭೀತಿ ಆವರಿಸತೊಡಗಿದೆ.

ಆ.1ರಂದು ಬೆಳಗ್ಗೆ ನೇತ್ರಾವತಿ ನದಿಯು ಸಮುದ್ರ ಮಟ್ಟಕ್ಕಿಂತ 28.0 ಎತ್ತರದಲ್ಲಿ ಹರಿಯತೊಡಗಿದ್ದು, ಸುಮಾರು ಹತ್ತೂವರೆ ಗಂಟೆಗೆ ಸ್ವಲ್ಪ ಮಟ್ಟಿನಲ್ಲಿ ನದಿಯಲ್ಲಿ ನೀರು ಕಡಿಮೆಯಾಗಿತ್ತು. ಆದರೆ ಮಧ್ಯಾಹ್ನ ಒಂದೂವರೆ ಗಂಟೆ ಯಿಂದ ಮತ್ತೆ ನೀರಿನ ಮಟ್ಟ ಏರಿಕೆಯಾಗತೊಡಗಿದ್ದು, ರಾತ್ರಿ ಏಳೂವರೆಯಾಗುವಾಗ 30 ಮೀಟರ್ಗೆ ಬಂದು ನಿಂತಿತ್ತು. ಇಲ್ಲಿ ನದಿ ನೀರಿನ ಅಪಾಯದ ಮಟ್ಟ 30.05 ಆಗಿದೆ. ಏಳೂವರೆ ಬಳಿಕ ಸ್ವಲ್ಪ ನೀರಿನ ಮಟ್ಟ ಕಡಿಮೆ ಯಾಗಿದ್ದು, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸ್ನಾನಘಟ್ಟದ ಬಳಿ ನದಿಗಿಳಿಯುವ 36 ಮೆಟ್ಟಿಲುಗಳಲ್ಲಿ ರಾತ್ರಿ ಏಳುವರೆಯ ತನಕ 35 ಮೆಟ್ಟಿಲುಗಳು ಮುಳುಗಿ ಒಂದು ಮೆಟ್ಟಿಲಷ್ಟೇ ಕಾಣುತ್ತಿತ್ತು. ಎಂಟು ಗಂಟೆಯಾಗುವಾಗ ಎರಡು ಮೆಟ್ಟಿಲುಗಳು ಕಾಣತೊಡಗಿವೆ. ನದಿಗಳು ಮೈದುಂಬಿ ಹರಿಯುತ್ತಿ ರುವುದರಿಂದ ನದಿ ಪಾತ್ರದ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ. ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ಬಳಿ ತಗ್ಗು ಪ್ರದೇಶಗಳಿಗೆ ನೇತ್ರಾವತಿಯ ನೆರೆ ನೀರು ನುಗ್ಗಿದ್ದು, ಪರಿಸರದ ಸುಮಾರು ಆರು ಮನೆಗಳ ನಿವಾಸಿಗರನ್ನು ಮತ್ತು ಮನೆಯಲ್ಲಿದ್ದ ಸಾಮನು ಸರಂಜಾಮುಗಳನ್ನು ಸ್ಥಳಾಂತರಿಸಲಾಗಿದೆ. ಇತ್ತ ಗುಂಡ್ಯ ಹೊಳೆಯಲ್ಲಿಯೂ ನೀರಿನ ಪ್ರಮಾಣ ಹೆಚ್ಚಿದ್ದು, ನದಿ ಪಾತ್ರದ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ.


