ತೂಮಿನಾಡು ; ಬಾವಿ ಕೆಲಸ ಮೊಟಕು ಹಿನ್ನೆಲೆ, ಸ್ಥಳೀಯರ ಆತಂಕ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತು ಎರಡನೇ ವಾರ್ಡು ವ್ಯಾಪ್ತಿಯ ತೂಮಿನಾಡು ಅಂಗನವಾಡಿಯ ಮುಂಭಾಗದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತು ನಿಧಿಯಿಂದ ಮಂಜೂರಾಗಿರುವ ಬಾವಿಯೊಂದರ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡು ಅದನ್ನು ಅರ್ಧದಲ್ಲೇ ಗುತ್ತಿಗೆದಾರ ಬಿಟ್ಟು ಹೋಗಿರುವುದು ಸ್ಥಳೀಯರ ಆತಂಕಗಳಿಗೆ ಕಾರಣವಾಗಿದೆ.
ಬಾವಿಯನ್ನು ಅರ್ಧ ಅಗೆದು ಹಾಗೆಯೇ ಬಿಡಲಾಗಿದೆ. ಬಾಯಿ ತೆರೆದು ಕೊಂಡಿರುವ ಈ ಬಾವಿಯಲ್ಲಿ ಈಗ ನೀರಿಲ್ಲದಿದ್ದರೂ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಮಳೆಯಿಂದ ನೀರು ತುಂಬ ಬಹುದು. ಇದರ ಪಕ್ಕದಿಂದಲೇ ಚಿಣ್ಣರು ಅಂಗನವಾಡಿಗೆ ತೆರಳ ಬೇಕಾಗಿದೆ. ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ತೆರೆದಿಟ್ಟಿರುವ ಬಾವಿಯಿಂದಾಗಿ ಅಪಾಯ ತಪ್ಪಿದ್ದಲ್ಲ. ಜೊತೆಯಾಗಿ ರಾತ್ರಿ ವೇಳೆಗಳಲ್ಲಿ ಒಂದು ಬೆಳಕಿನ ವ್ಯವಸ್ಥೆ ಕೂಡಾ ಇಲ್ಲದ ಈ ಸ್ಥಳದಲ್ಲಿ ದ್ವಿ ಚಕ್ರ ವಾಹನಗಳು ಸೇರಿದಂತೆ ಹಲವಾರು ವಾಹನಗಳು ಈ ದಾರಿಯಾಗಿ ಬರುತ್ತಿರುತ್ತವೆ. ಕತ್ತಲಲ್ಲಿ ತೆರೆದ ಬಾವಿಯನ್ನು ಕಾಣದೆ ಅನಾಹುತ ಸಂಭವಿಸುವ ಸಾಧ್ಯತೆ ಭಾರೀ ಹೆಚ್ಚು. ಸಂಬಂಧ ಪಟ್ಟವರು ಕೂಡಲೇ ಇತ್ತ ಕಡೆ ಗಮನ ಹರಿಸಿ ಅವಘಡ ಸಂಭವಿಸುವ ಮೊದಲೇ ಎಚ್ಚೆತ್ತು ಮೊಟಕುಗೊಂಡ ಬಾವಿ ಕಾಮಗಾರಿ ಮುಗಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
